ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ನೆಲಕ್ಕೆ ಕಾಲಿರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನೇನು ಕೆಲವೇ ಕ್ಷಣಗಳಲ್ಲಿ ಮೈಸೂರಿಗೆ ಭೇಟಿ ನೀಡಲಿದ್ದು,
ರಾತ್ರಿ 8.15ಕ್ಕೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರುಶನ ಪಡೆಯಲಿದ್ದಾರೆ.
ಈ ಅಪೂರ್ವ ಘಳಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನ ಮಂತ್ರಿ ಎನಿಸಿಕೊಳ್ಳುವ ಮೂಲಕ ಮೋದಿ, ಇತಿಹಾಸದ ಸ್ವರ್ಣಪುಟಗಳಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ.
ನಾಳೆ ಮೈಸೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೋದಿ ಸಾಂಸ್ಕೃತಿಕ ನಗರಕ್ಕೆ ಮತ್ತಷ್ಟು ಮೆರಗು ತರಲಿದ್ದಾರೆ.
ಪ್ರಧಾನಿಯವರ ಪ್ರವಾಸಪಟ್ಟಿಯಲ್ಲಿ ಮೈಸೂರು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾತ್ರ ನಿರ್ಧಾರವಾಗಿತ್ತು. ಈ ನಡುವೆ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಾಯಕರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಬೇಕು ಎನ್ನುವ ಉದ್ದೇಶದಿಂದ ಪ್ರಧಾನಿಯವರಿಗೆ ಮನವಿ ಮಾಡಿದ್ದು, ಅದರಂತೆ ಇದೀಗ ಚಾಮುಂಡಿಬೆಟ್ಟಕ್ಕೆ ಮೋದಿಯವರು ಭೇಟಿ ನೀಡುತ್ತಿದ್ದಾರೆ.
ದೇಶದ ಪ್ರಧಾನಿ ತಮ್ಮ ಅಧಿಕಾರದ ಅವಧಿಯಲ್ಲಿ ಇಲ್ಲಿಗೆ ಆಗಮಿಸಿಲ್ಲ. ಮೋದಿಯವರೇ ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರಥಮ ಪ್ರಧಾನಿ ಎಂದು ದೇಗುಲದ ಮೂಲಗಳು ತಿಳಿಸಿವೆ.