ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ನಲ್ಲಿ 10 ದಿನಗಳ ಕಾಲ ನಡೆದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿಯ ವಿಚಾರಣೆ ಪ್ರಕ್ರಿಯೆ ಗುರುವಾರದ ಫೈನಲ್ ಸಬ್ಮಿಷನ್ನೊಂದಿಗೆ ಅಂತ್ಯಕಂಡಿದೆ.
ಕೆಲ ದಿನಗಳಿಂದ ಮಾಡಿದ್ದ ವಾದಗಳಿಗೆ ಗುರುವಾರ ಅರ್ಜಿದಾರರ ಪರ ವಕೀಲರು ಇನ್ನಷ್ಟು ವಾದ ಮಂಡನೆ ಮಾಡುವುದರೊಂದಿಗೆ ವಿಚಾರಣೆ ಅಂತ್ಯಕಂಡಿದ್ದು, ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗು ಮತ್ತು ರಾಜ್ಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರ ವಾದವನ್ನೂ ಆಲಿಸಿತು. ಕಾಲೇಜು ಶಿಕ್ಷಕರ ಪರ ಹಿರಿಯ ವಕೀಲರಾದ ಆರ್.ವೆಂಕಟರಮಣಿ, ದಾಮ ಶೇಷಾದ್ರಿ ನಾಯ್ಡು, ವಿ.ಮೋಹನ ವಾದ ಮಂಡಿಸಿದರು.