ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ವಿಧಾನಸಭಾ ಅಧಿವೇಶನದಲ್ಲಿ ಇಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಐತಿಹಾಸಿಕ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದರು. ಈ ಮೂಲಕ ಮೂರನೇ ಭಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಚುನಾವಣೆ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಿದೆ.
ಅಲ್ಪಸಂಖ್ಯಾತ ಮಹಿಳೆಯರಿಗೆ ಸುರಕ್ಷತೆ
ಈ ಕುರಿತು ಮಾತನಾಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಯುಸಿಸಿಯನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದೆವು. ಇದೀಗ ನಾವು ನುಡಿದಂತೆ ಯುಸಿಸಿ ಮಸೂದೆಯನ್ನು ಪರಿಚಯಿಸಿದ್ದೇವೆ. ಈ ಮೂಲಕ ದಶಕಗಳಿಂದ ಸಂಕಷ್ಟ ಪಡುತ್ತಿದ್ದ ಅಲ್ಪಸಂಖ್ಯಾತ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಮೂರನೇ ರಾಜ್ಯ ನಮ್ಮ ಅಸ್ಸಾಂ
ಈಗಾಗಲೇ ಉತ್ತರಾಖಂಡ ಮತ್ತು ಗುಜರಾತ್ ಯುಸಿಸಿಯನ್ನು ಜಾರಿಗೆ ತಂದಿದೆ. ಇದೀಗ ಮೂರನೇ ರಾಜ್ಯ ನಮ್ಮ ಅಸ್ಸಾಂ ಆಗಲಿದೆ ಎಂದು ಹೇಳಲು ಖುಷಿಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಸುರಕ್ಷಿತ ಮತ್ತು ಸ್ವತಂತ್ರ ಜೀವನವನ್ನು ನಡೆಸುವ ಭರವಸೆ ನನಗಿದೆ ಎಂದು ತಿಳಿಸಿದರು.



