ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ‘ಬೆಂಗಳೂರು ಕಡಲೆಕಾಯಿ ಪರಿಷೆ’ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ ಆರಂಭಗೊಳ್ಳುವ ಬಸವನಗುಡಿ ಪರಿಷೆಯ ಹಿನ್ನೆಲೆ ಮಾತ್ರ ನಿಜಕ್ಕೂ ಇಂಟ್ರೆಸ್ಟಿಂಗ್ ಆಗಿದೆ!
ಹಾಗಾದರೆ ಏನೆನ್ನುತ್ತದೆ ಇತಿಹಾಸ? ಏನನ್ನುತ್ತಾರೆ ಹಿರಿಯರು? ನೋಡೋಣ ಬನ್ನಿ…
ಇತಿಹಾಸದ ಪುಟಗಳ ಪ್ರಕಾರ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು 1537ರಲ್ಲಿ ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯ ಸ್ಥಾಪಿಸಿದ್ದಾರೆ. ಸದ್ಯ ಬುಲ್ ಟೆಂಪಲ್ ಎಂದು ಕರೆಸಿಕೊಳ್ಳುವ ಈ ದೇವಾಲಯದಲ್ಲಿ ಹಿಂದಿನಿಂದಲೂ ಕೃಷಿಕರು ತಾವು ಬೆಳೆದ ಕಡಲೆಕಾಯಿಯನ್ನು ಅರ್ಪಿಸುವುದು ರೂಢಿಯಾಗಿ ಬಂದಿದೆ.
ಇನ್ನು ಹಿರಿಯರು ಹೇಳುವ ಸ್ಟೋರಿ ಹೀಗಿದೆ…
ಇಸವಿ 1537ಕ್ಕೂ ಹಿಂದೆ ಸ್ವರ್ಗ ಲೋಕದಿಂದ ಬರುವ ನಂದಿ, ಈ ಭಾಗದಲ್ಲಿ ಕೃಷಿಕರು ಬೆಳೆಯುತ್ತಿದ್ದ ಬೆಳೆಯನ್ನ ತಿಂದು ಹೋಗುತ್ತಿತ್ತು. ಇದರಿಂದ ಹೈರಾಣಾದ ಕೃಷಿಕರು ಪರಿಹಾರ ಮಾರ್ಗವಾಗಿ ಬೆಟ್ಟದ ಮೇಲೆ ದೊಡ್ಡ ಬಸವಣ್ಣವ ದೇವಾಲಯ ಸ್ಥಾಪಿಸಿ, ಪ್ರತಿವರ್ಷ ತಾವು ಬೆಳೆದ ಕಡಲೆಕಾಯಿಯನ್ನು ತಂದು ಇಲ್ಲಿನ ನಂದಿಗೆ ಅರ್ಪಿಸಲು ಶುರುಮಾಡಿದರು. ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಅಂದಿನಿಂದ ಸುತ್ತಲಿನ ಗ್ರಾಮಗಳ ಕೃಷಿಕರು ಪ್ರತೀ ವರ್ಷ ಬಂದು ಬಸವನಿಗೆ ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಅರ್ಪಿಸುತ್ತಾರೆ. ಆ ಸಂಪ್ರದಾಯ ಇಂದಿಗೂ ಮುಂದುವರಿದು ಬಂದಿದೆ.