ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್ ಮಾತ್ರವಲ್ಲ ಅವರ ಮನೆಮಂದಿಯೂ ಎಷ್ಟು ಜನಪರ ಕಾಳಜಿ ಹೊಂದಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ ನುಡಿಯುತ್ತದೆ…
ಮನೆಯ ಆಧಾರ ಸ್ತಂಭವನ್ನೇ ಕಳೆದುಕೊಂಡು ದುಃಖಿತವಾಗಿರುವ ಕುಟುಂಬಕ್ಕೆ ಸಾಂತ್ವನ ಹೇಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಖುದ್ದು ಅವರ ಮನೆಗೆ ತೆರಳಿದ್ದರು. ಈ ಸಂದರ್ಭ ನೋವಿನ ನಡುವೆಯೂ ಪ್ರವೀಣ್ ಪತ್ನಿ ನೆಟ್ಟಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ಸರಿಪಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಲ್ಲಿ ರಾತ್ರಿ ಹೊತ್ತು ವೈದ್ಯರೇ ಇರುವುದಿಲ್ಲ. ಇದರಿಂದಾಗಿ ಈ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಂದು ಪ್ರಾಥಮಿಕ ಚಿಕಿತ್ಸೆ ಸಿಗುತ್ತಿದ್ದರೆ ನನ್ನ ಪತಿಯನ್ನು ಬದುಕಿಸಬಹುದಿತ್ತು ಎಂದು ಅವರು ನೊಂದು ನುಡಿದಿದ್ದಾರೆ. ನನ್ನ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಆದರೆ ಇನ್ನು ಳಿದವರಿಗಾದರೂ ಸಹಾಯವಾಗಲಿ ಎಂದು ಕೇಂದ್ರ ಸಚಿವೆಯಲ್ಲಿ ಪ್ರವೀಣ್ ಪತ್ನಿ ನೂತನಾ ಮನವಿ ಮಾಡಿಕೊಳ್ಳುತ್ತಿದ್ದರೆ ಅಲ್ಲಿ ಜೊತೆಗಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು…