ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಸೋಲಿನ ಬಳಿಕ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಎರಡು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇಂದು ರಾತ್ರಿ 10.50ಕ್ಕೆ ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅಮಿತ್ ಶಾ, ನೇರವಾಗಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರೆಡಿಸನ್ ಬ್ಲೂ ಹೋಟೆಲ್ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಹೋಟೆಲ್ನಲ್ಲಿ ವಿಶೇಷ ಸಿದ್ದತೆ ಮಾಡಲಾಗಿದೆ. ಅಮಿತ್ ಶಾ ಭಾವಚಿತ್ರದ ಊಟ, ತಿಂಡಿ ಮೆನು ಕಾರ್ಡ್ ಸಿದ್ಧಪಡಿಸಲಾಗಿದ್ದು, ಗುಡ್ ನೈಟ್, ಗುಡ್ ಮಾರ್ನಿಂಗ್ ಶುಭಾಶಯ ಹೊಂದಿರಲಿದೆ. ಅಮಿತ್ ಶಾ ಅವರ ಭಾವಚಿತ್ರವಿರುವ ಕರವಸ್ತ್ರ ಮತ್ತು ಟವೆಲ್ಗಳನ್ನು ಸಿದ್ದಪಡಿಸಲಾಗಿದೆ.
ಅಮಿತ್ ಶಾ ಸಂಚರಿಸುವ ಮಾರ್ಗದಲ್ಲಿ ಪೊಲೀಸ್ ಬಂದೋಬಸ್ತ್
ಅಮಿತ್ ಶಾ ಅವರು ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಅಮಿತ್ ಶಾ ಉಳಿದುಕೊಳ್ಳಲಿರುವ ಹೋಟೆಲ್ ಕೊಠಡಿಗಳು ಸೇರಿದಂತೆ ಸಂಪೂರ್ಣವಾಗಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಖಾಸಗಿ ಹೋಟೆಲ್ ಸುತ್ತಮುತ್ತ ಪೊಲೀಸ್ ಕಣ್ಗಾವಲು ವಹಿಸಲಾಗಿದೆ.
ಅಮಿತ್ ಶಾ ಸಂಚರಿಸುವ ಮಾರ್ಗದಲ್ಲಿ ಪೊಲೀಸ್ ಇಲಾಖೆಯಿಂದ ಕಾನ್ವೇ ರಿಹರ್ಸಲ್ ಮಾಡಲಾಗಿದ್ದು, ಹೋಟೆಲ್ ಮುಂಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ರಾಜ್ಯದಲ್ಲಿ ಚುನಾವಣಾ ತಂತ್ರಗಾರಿಕೆ
ಅಮಿತ್ ಶಾ, ರಾಜ್ಯದಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ವಿಧಾನಸಭೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಮೊದಲ ಭಾರಿಗೆ ರಾಜ್ಯ ಪ್ರವಾಸ ಮಾಡುತ್ತಿರುವ ಅಮಿತ್ ಶಾ ಬಿಜೆಪಿ-ಜೆಡಿಎಸ್ ನಾಯಕರಿಗೆ ಚುನಾವಣೆ ಗೆಲ್ಲಲು ಹೊಸ ಟಾಸ್ಕ್ ನೀಡುವ ಸಾಧ್ಯತೆ ಇದೆ.
ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿಂದೆ ಅಮಿತ್ ಶಾ ಜೊತೆ ಜೆಡಿಎಸ್ ನಾಯಕರ ಮೈತ್ರಿ ಮಾತುಕತೆ ವೇಳೆ ರಾಜ್ಯಕ್ಕೆ ಬಂದಾಗ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಅಮಿತ್ ಶಾ, ಕುಮಾರಸ್ವಾಮಿ ನಿವಾಸದ ಭೇಟಿ ಹಿಂದೆ ಸಾಕಷ್ಟು ಲೆಕ್ಕಾಚಾರ ಕೂಡ ಅಡಗಿದೆ.