ಹೊಸದಿಗಂತ ವರದಿ ಶಿವಮೊಗ್ಗ:
ಶಿವಮೊಗ್ಗ ಹಾಲು ಒಕ್ಕೂಟದಿಂದ ಪ್ರತಿ ಲೀಟರ್ ಹಾಲಿಗೆ ಲೀಟರ್ ನೀರಿಗಿಂತ ಕಡಿಮೆ ದರ ನೀಡಲಾಗುತ್ತಿದೆ ಎಂದು ಆರೋಪಿಸಿ ‘ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ವತಿಯಿಂದ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್) ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಿಮೂಲ್ ಮುಂದೆ ಹಾಲು ಚೆಲ್ಲುವ ಮೂಲಕ ಮತ್ತು ಕೆಲಕಾಲ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಾಯಿತು. ರೈತರ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಂದೋಬಸ್ತ್ ನಿರತ ಪೊಲೀಸರು ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಳೆದ ಆಗಸ್ಟ್ನಲ್ಲಿ ಶಿಮುಲ್ನಿಂದ ಮೊದಲ ಬಾರಿಗೆ ರೈತರಿಂದ ಖರೀದಿ ಮಾಡುವ ಹಾಲಿನ ದರ ಇಳಿಸಲಾಗಿತ್ತು. ನವೆಂಬರ್ ತಿಂಗಳಿನಲ್ಲಿ ಎರಡನೇ ಬಾರಿ ಇಳಿಸಿದ್ದಾರೆ. ಈವರೆಗೆ ಒಟ್ಟು ಪ್ರತಿ ಲೀಟರ್ಗೆ 3.75 ರೂ. ನಷ್ಟು ರೈತರಿಂದ ಹಾಲು ಖರೀದಿ ದರವನ್ನ ಶಿಮೂಲ್ ಇಳಿಸಿದೆ ಎಂದು ಆರೋಪಿಸಿದರು.
ಈಗ ಪ್ರತಿ ಲೀಟರ್ ಹಾಲಿಗೆ ರೈತರಿಗೆ ಕೇವಲ 29 ರೂ. ನೀಡಲಾಗುತ್ತಿದೆ. ಪ್ರತಿ ಲೀಟರ್ ನೀರಿನ ಬೆಲೆ 20 ರೂ. ಇದೆ. ಹಾಲು ಒಕ್ಕೂಟ ಹಾಲಿಗೆ ಬೆಲೆ ಇಲ್ಲದಂತೆ ಮಾಡಿದೆ. ಆದರೆ ಗ್ರಾಹಕರಿಗೆ ಮಾರಾಟ ಆಗುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ರೈತರಿಗೆ ಒಕ್ಕೂಟ ಮೋಸ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.