ಹೊಸ ದಿಗಂತ ವರದಿ, ಮಡಿಕೇರಿ:
ಕೊಡವ ಯುವಕರ ತಂಡ ನಿರ್ಮಿಸುತ್ತಿರುವ “ಮಿಸ್ಸಿಂಗ್ ಗ್ಯಾಂಗ್” ಕನ್ನಡ ಚಲನಚಿತ್ರ ಚಿತ್ರೀಕರಣಕ್ಕೆ ಹೈಸೊಡ್ಲೂರು ಶ್ರೀ ಮಹಾದೇವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಮಾಜಿ ಸೈನಿಕ ಮತ್ತು ಹುದಿಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೊಜ್ಜಂಗಡ ಸುನಿಲ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭಕ್ಕೆ ಚಾಲನೆ ನೀಡಿದರು.
ಮಹಾದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಚಿತ್ರತಂಡ ಹುದಿಕೇರಿ, ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಚಿತ್ರೀಕರಣ ನಡೆಸಿತು.
ನಿರ್ಮಾಪಕ ಪಂಪಾಪತಿ ಅವರ ಯಮುನಾ ಕ್ರಿಯೇಷನ್ನಲ್ಲಿ ದುರ್ಗಾರಾಮ್ ಅವರ ಕಥೆ ಮತ್ತು ನಿರ್ದೇಶನದಲ್ಲಿ ದರೋಡೆ ಪ್ರಕರಣದ ಸುತ್ತ ಹೆಣೆದ ಕಥೆಗೆ ಮಿಸ್ಸಿಂಗ್ ಗ್ಯಾಂಗ್ ಎಂಬ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಆರ್. ನಾಗರಾಜ್ ಅವರ ಛಾಯಾಗ್ರಹಣದಲ್ಲಿ ಕೊಡಗಿನ ಪರಿಸರದಲ್ಲಿ ಶೇ. 70ರಷ್ಟು ಚಿತ್ರೀಕರಣ ನಡೆಯಲಿದ್ದು, ಉಳಿದ ಶೇಕಡವಾರು ಚಿತ್ರೀಕರಣವನ್ನು ಕಾರವಾರ, ಬೆಂಗಳೂರು, ಗೋವಾ, ಹುಬ್ಬಳ್ಳಿ ಮತ್ತು ರಾಯಚೂರು ಭಾಗಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ.
ಮೂಲತಃ ಕೊಡಗಿನವರೇ ಹೆಚ್ಚಾಗಿ ಸಿನಿಮಾದಲ್ಲಿ ಕಲಾವಿದರಾಗಿದ್ದು, ಬೊಜ್ಜಂಗಡ ಸೋಮಣ್ಣ ನಾಯಕ ನಟನಾಗಿ ಮತ್ತು ಚೋನಿರ ರಂಜನ್ ಪೊನ್ನಣ್ಣ ಪೊಲೀಸ್ ಪಾತ್ರದಲ್ಲಿ, ವ್ಯವಸ್ಥಾಪಕ ಪಾತ್ರದಲ್ಲಿ ಬಿದ್ದಂಡ ಉತ್ತಮ್, ತಾತಂಡ ವಿನು ನವೀನ್, ಚಮ್ಮಟಿರ ರಿಷಿ ಇವರುಗಳು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ರಾಯಚೂರು, ಉತ್ತರ ಕನ್ನಡ ಭಾಗದ ಕಲಾವಿದರಾದ ಜಗದೀಶ್, ವಿಜಯ್, ಪಂಪಪಾಲ, ಚೆನ್ನಬಸವ, ಪ್ರೀತಿ, ನಿವೇದಿತಾ, ಸನಿಹ ನಟಿಸಲಿದ್ದಾರೆ. ಪ್ರತಿಮಾ ಬೆಳ್ಳಿಮನೆ, ಪ್ರಿಯದರ್ಶಿನಿಯವರು ಹಿನ್ನೆಲೆ ಗಾಯಕರಾಗಿದ್ದು, ಹರೀಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.