ಹೊಸ ದಿಗಂತ ಆನ್ಲೈನ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಚೆರ್ವತ್ತೂರಿನ ಅಂಗಡಿಯೊಂದರಲ್ಲಿ ಶವರ್ಮ (ಮಾಂಸ ಮಿಶ್ರಿತ ಖಾದ್ಯ) ಸೇವಿಸಿ ಮೃತಪಟ್ಟ ವಿದ್ಯಾರ್ಥಿನಿ ದೇವನಂದಾ (16)ಳ ಅಂತ್ಯಕ್ರಿಯೆ ನೂರಾರು ಮಂದಿಯ ಕಣ್ಣೀರಿನ ನಡುವೆ ವೆಳ್ಳೂರಿನಲ್ಲಿ ನಡೆಸಲಾಯಿತು.
ಇದಕ್ಕೂ ಮುನ್ನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಳಿಕ ಆಕೆ ಕಲಿಯುತ್ತಿದ್ದ ಶಾಲೆಯಲ್ಲಿ ಕೆಲಕಾಲ ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಕೇರಳ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಆಹಾರ ಸುರಕ್ಷಾ ವಿಭಾಗ ಅಲರ್ಟ್ ಆಗಿದ್ದು, ಎಲ್ಲೆಡೆ ತಪಾಸಣೆ ಚುರುಕುಗೊಳಿಸಿದೆ. ಈ ಖಾದ್ಯ ಮಾರಾಟ ಮಾಡುವ ಕೇಂದ್ರದ ಶುಚಿತ್ವ, ಬಳಸುವ ಮಾಂಸ, ಪರವಾನಿಗೆಗಳನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಆಹಾರ ಸುರಕ್ಷಾ ಆಯುಕ್ತ ವಿ.ಆರ್. ವಿನೋದ್ ಈಗಾಗಲೇ ಅದೇಶ ನೀಡಿದ್ದಾರೆ.