ಹೊಸದಿಗಂತ ವರದಿ,ಹಾವೇರಿ:
ನಾನು ಶಿಗ್ಗಾವ್ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಮುಖ್ಯಮಂತ್ರಿಯಲ್ಲ. ನಾನು ಈ ಕ್ಷೇತ್ರ ಬಿಟ್ಟು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಈ ಕ್ಷೇತ್ರದ ಜನರೇ ನನ್ನ ಮಾಲೀಕರು. ಏನೇ ಆದರೂ ಈ ಕ್ಷೇತ್ರದ ಜನರ ಮುಂzನೇ ತೀರ್ಮಾನ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವ್ ಪಟ್ಟಣದಲ್ಲಿ ಬುಧವಾರ ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಪತ್ರಕರ್ತರು ಬೇರೆ ಕ್ಷೇತ್ರದ ಕಡೆ ಹೋಗುತ್ತೀರಿ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಕೇಳಿದ ಸಂದರ್ಭದಲ್ಲಿ ನಾನು ಯಾವ ನನ್ನ ಮಗ ಹೇಳಿದ್ದು ಎಂದು ಕೇಳಿದ್ದೆ. ನಾನು ಕ್ಷೇತ್ರ ಬಿಟ್ಟು ದಾವಣಗೆರೆಗೆ ಹೋಗುತ್ತೆನೆ ಎಂದು ಹಬ್ಬಿಸಿದ್ದರು. ಇಲ್ಲ ಇಲ್ಲೇ ಸ್ಫರ್ಧಿಸುತ್ತೇನೆ ಎಂದು ಹೇಳುವುದು ಇಲ್ಲಿನ ಜನರ ಮೇಲಿನ ನಂಬಿಕೆ ಮತ್ತು ಇದು ನನ್ನ ಆತ್ಮಸ್ಥೈರ್ಯ. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ. ಅದರಲ್ಲಿ ನನ್ನ ನಂಬಿಕೆಯಿದೆ. ಹೀಗಾಗಿ ಇದೇ ಕ್ಷೇತ್ರೆದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೆ ಎಂದರು.
ಬೇರೆ ಪಕ್ಷಗಳಲ್ಲಿನ ಮಾಜಿ ಮುಖ್ಯಮಂತ್ರಿ ಮತ್ತು ನಾಯಕರು ಸೋಲಿನ ಭಯದಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಮುಂದಾಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷವಾಗಿ ಚಾಟಿ ಏಟು ಬೀಸಿದಂತಿತ್ತು.
ವೇದಿಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರಾಕ ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಚಿತ್ರ ನಟ ಸುದೀಪ್ ಸೇರಿದಂತೆ ಇತರರಿದ್ದರು.