ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಹೈ ವೋಲ್ಟೇಜ್ ಕಣವಾಗಿರುವ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಹುರಿಯಾಳಾಗಿ ಮಣಿಕಂಠ ರಾಠೋಡ್ ಬುಧವಾರ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಪಾರ ಬೆಂಬಲಿಗರ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿ, ಉಮೇದುವಾರಿಕೆ ಸಲ್ಲಿಸಿದರು.
ಚಿತ್ತಾಪುರ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ನವೀನಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ರಾಠೋಡ್ ಗೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಸುನಿಲ್ ವಲ್ಲಾಪರೆ, ಬಿಜೆಪಿ ಮುಖಂಡರಾದ ಬಸವರಾಜ ಬೆಣ್ಣೂರಕರ್, ದೇವೆಂದ್ರನಾದ, ವಿಠ್ಠಲ್ ನಾಯಕ್, ಅಯ್ಯಪ್ಪ ರಾಮತಿರ್ಥ, ಲಿಂಗರೆಡ್ಡಿ ಬಸರಡ್ಡಿ, ಮುಕುಂದ ದೇಶಪಾಂಡೆ, ಸೋಮಶೇಖರ್ ಪಾಟೀಲ ಬೆಳಗುಂಪಾ, ರಾಜು ಮುಕ್ಕಣ್ಣ, ಶಂಕರ ಚವ್ಹಾಣ್, ಸೇರಿದಂತೆ ಅನೇಕರು ಸಾಥ್ ನೀಡಿದರು.
ಚಿತ್ತಾಪುರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು, ಪಕ್ಷದ ಧ್ವಜವನ್ನು ಹಿಡಿದು ಜಯ ಘೋಷ ಹಾಕುತ ಬೃಹತ್ ರೋಡ್ ಶೋ ದಲ್ಲಿ ಭಾಗವಹಿಸಿ ಮಣಿಕಂಠಗೆ ಬೆಂಬಲ ಸೂಚಿಸಿದರು.