ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ನೋಟುಗಳ ಮೇಲೆ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು. ಇಂದು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ ಫೋಟೋ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸಬೇಕು. ಆ ಎರಡು ದೇವರುಗಳ ಚಿತ್ರಗಳನ್ನು ಕರೆನ್ಸಿ ಮೇಲೆ ಮುದ್ರಿಸಿದರೆ ದೇಶದ ಏಳಿಗೆಗೆ ಅನುಕೂಲವಾಗುತ್ತದೆ ಎಂದರು.
ದೇವರ ಕೃಪೆಯಿಲ್ಲದೆ ಕೆಲವೊಮ್ಮೆ ನಾವು ಅನೇಕ ಕೆಲಸಗಳಿಗೆ ಶ್ರಮಿಸಿದರೂ ಫಲ ಸಿಗುವುದಿಲ್ಲ ಎಂದರು. ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಕರೆನ್ಸಿಯ ಮೇಲೆ ಗಣೇಶನ ಫೋಟೋ ಇದೆ ಎಂಬುದನ್ನು ನೆನಪಿಸಿದರು. ಅಪಾರ ದೈವ ಭಕ್ತಿ ಇರುವ ನಮ್ಮ ದೇಶದ ಕರೆನ್ಸಿಯಲ್ಲಿ ಏಕೆ ಇರಬಾರದು? ಈ ಕುರಿತು ಶೀಘ್ರವೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಅಮೆರಿಕದ ಡಾಲರ್ ಗೆ ಹೋಲಿಸಿದರೆ ಭಾರತೀಯ ರೂಪಾಯಿ ವಿನಿಮಯ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೇಶದ ಆರ್ಥಿಕತೆಯನ್ನು ಸುಸ್ಥಿರವಾಗಿಡಬೇಕಾದರೆ ನಮ್ಮ ಪ್ರಯತ್ನಗಳನ್ನು ಮಾಡುತ್ತಲೇ ಪರಮಾತ್ಮನ ಕೃಪೆಯನ್ನೂ ಪಡೆಯಬೇಕು ಎಂದು ಪ್ರತಿಕ್ರಿಯಿಸಿದರು.