ಹೊಸದಿಗಂತ ವರದಿ, ಶಿವಮೊಗ್ಗ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಇದರಿಂದಾಗಿ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.
ಬುಧವಾರ ಮಾಧ್ಯಹ್ನ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಇದನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ ಎಂದರು.
ರಾಜೀನಾಮೆ ಕೇಳುತ್ತಿರುವುದರ ಹಿಂದಿನ ಷಡ್ಯಂತ್ರದ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ಯಾವುದೇ ಡೆತ್ ನೋಟ್ ಇಲ್ಲದಿದ್ದರೂ ಕೂಡ ಕೇವಲ ವಾಟ್ಸಪ್ ಸಂದೇಶ ಮಾತ್ರ ನೆಪ ಮಾಡಿಕೊಂಡು ರಾಜೀನಾಮೆ ಕೇಳಲಾಗುತ್ತಿದೆ. ಹೀಗಾಗಿ ಇದರ ಹಿಂದೆ ಷಡ್ಯಂತ್ರವಿದೆ ಎಂದರು.
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಯಾವುದೇ ಆಧಾರ ಇಲ್ಲದೆ ಆರೋಪ ಮಾಡುತ್ತಿದ್ಧಾರೆ. ಡಿವೈಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಸ್ವತಃ ಅವರೇ ಮಾಧ್ಯಮಗಳಿಗೆ ಮಾಹಿತ ನೀಡಿದ್ದರು. ಡೆತ್ ನೋಟ್ ಕೂಡ ಅವರ ಕೈಯಾರ ಬರೆದು ಸಹಿ ಮಾಡಿದ್ದರು. ಈ ಪ್ರಕರಣದಲ್ಲಿ ಅದ್ಯಾವುದೂ ಇಲ್ಲ. ನಾನು ಸಂತೋಷ್ ಪಾಟೀಲ್ ಹಾಗೂ ಅವರನ್ನು ಸಂದರ್ಶನ ಮಾಡಿದ್ದ ಖಾಸಗಿ ಟಿವಿ ವಾಹಿನಿ ಮೇಲೆ ಮಾನಷ್ಟ ಮೊಕದ್ದಮೆ ಹೂಡಿದ್ದು, ಇದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ