ನಾನು ಕುರಾನ್‌, ಹದೀಸ್‌ ಓದಿದ್ದೇನೆ, ಹಾಗಂತ ತುಷ್ಟೀಕರಣಕ್ಕಾಗಿ ಟೋಪಿ ಹಾಕಲ್ಲ: ಅಣ್ಣಾಮಲೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ , ಕೊಯಮತ್ತೂರು ಬಿಜೆಪಿ ಅಭ್ಯರ್ಥಿ ಕೆ.ಅಣ್ಣಾಮಲೈ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.ಈ ನಡುವೆ ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಕೆ.ಅಣ್ಣಾಮಲೈ ಮೂಲತಃ ಐಪಿಎಸ್‌ ಅಧಿಕಾರಿಯಾಗಿದ್ದವರು. ಐಪಿಎಸ್‌ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಅವರೀಗ ತಮಿಳುನಾಡಿಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದಾರೆ.

ಇತ್ತ ಸಂದರ್ಶನದಲ್ಲಿ ಮಾತನಾಡಿದ ಅವರು, ಉಡುಪಿ ಎಸ್‌ಪಿಯಾಗಿದ್ದ ಸಂದರ್ಭ ಕುರಾನ್‌ ಹಾಗೂ ಹದೀಸ್‌ಅನ್ನು ನಾನು ಓದಿದ್ದೆ ಎನ್ನುವುದನ್ನು ತಿಳಿಸಿದ್ದಾರೆ.

ಉಡುಪಿಯಲ್ಲಿ ಎಸ್‌ಪಿ ಆಗಿದ್ದಾಗ ನೀವು, ಇಸ್ಲಾಂನ ಕುರಾನ್‌ ಹಾಗೂ ಹದೀಸ್‌ಅನ್ನು ಓದಿದ್ದೀರಿ ಎಂದು ತಿಳಿಸಿದ್ದೀರಿ, ಇದರ ಬಗ್ಗೆ ಏನು ಹೇಳುತ್ತೀರಿ ಎನ್ನುವ ಪ್ರಶ್ನೆಗೆ, ‘ನನಗೆ ತುಂಬಾ ಆತ್ಮೀಯ ಮುಸ್ಲಿಂ ಸ್ನೇಹಿತರಿದ್ದಾರೆ. ಅವರು ನನಗೆ ಮಸೀದಿಗಳಿಗೂ ಆಹ್ವಾನಿಸಿದ್ದಾರೆ. ರಂಜಾನ್‌ ಸಮಯದಲ್ಲಿ ಉಡುಗೊರೆಗಳನ್ನು ನೀಡುವ ಸಲುವಾಗಿ ನಾನು ಕೂಡ ಮಸೀದಿಗಳಿಗೆ ತೆರಳಿದ್ದೇನೆ. ಜಿಲ್ಲೆಯ ಎಸ್‌ಪಿಯಾಗಿ ನನಗೆ ಈ ಆಹ್ವಾನ ನೀಡಲಾಗುತ್ತಿತ್ತು. ಇದೇ ಸಮಯದಲ್ಲಿ ಕೇರಳದಲ್ಲಿ ಇಸ್ಲಾಮಿಕ್‌ ಸ್ಟೇಟ್ಸ್‌ಗೆ ಯುವಕರು ಸೇರುತ್ತಿದ್ದರು. ಕುಂದಾಪುರ, ಉಡುಪಿ, ಕೇರಳ ಭಾಗದಲ್ಲಿ ಇಂಥ ಸುದ್ದಿಗಳು ಬರುತ್ತಿದ್ದವು. ಇಸ್ಲಾಮಿಕ್‌ ಸ್ಟೇಟ್ಸ್‌ಗೆ ಇಲ್ಲಿನ ಯುವಕರು ಸೇರುತ್ತಿದ್ದಾರೆ ಎನ್ನುವ ವರದಿಗಳಿದ್ದವು. ಈ ಹಂತದಲ್ಲಿ ನಮ್ಮ ಪೊಲೀಸ್‌ ಫೋರ್ಸ್‌ ಜೊತೆಗೆ ಜಿಲ್ಲೆಯ ಎಸ್‌ಪಿಯಾಗಿ ನಾನೇ ಒಂದು ನಿರ್ಧಾರ ಮಾಡಿದೆ. ಕರಾವಳಿ ಭಾಗದಲ್ಲಿ ಯಾವುದೇ ಮೂಲಭೂತವಾದಗಳು ಆಗಬಾರದು ಎಂದು ನಿರ್ಧಾರ ಮಾಡಿದ್ದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು ಹಾಗೂ ಕಾರವಾರ ಎಂದಿಗೂ ಇಂಥ ವಿಚಾರಗಳ ಹಾಟ್‌ಬೆಲ್ಟ್‌ಗಳು. ಕೇರಳ ಮಾಡೆಲ್‌ಗಳು ಕರ್ನಾಟಕದಲ್ಲಿ ಅದರಲ್ಲೂ, ಕರಾವಳಿಯಲ್ಲಿ ಆಗಲೇಬಾರದು ಎಂದು ನಿರ್ಧಾರ ಮಾಡಿದ್ದೆ.ಇದಕ್ಕಾಗಿ ನಾನೇ ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಿ, ಮುಸ್ಲಿಂ ಸ್ಕಾಲರ್‌ಗಳುನ್ನು ಭೇಟಿ ಮಾಡಿದೆ. ಯಾರೂ ಕೂಡ ಮೂಲಭೂತವಾದಕ್ಕೆ ಇಳಿಯಬಾರದು. ಇಂಥ ಪ್ರಯತ್ನಕ್ಕೆ ಬೆಂಬಲವನ್ನೂ ನೀಡಬಾರದು ಎಂದು ಮನವಿ ಮಾಡಿಕೊಂಡೆ. ರಂಜಾನ್‌ ಸಮಯದಲ್ಲಿ ಉಪವಾಸ ಮಾಡುವುದನ್ನು ನೋಡುತ್ತಿದ್ದೆ. ಕೆಲವು ನನ್ನ ಸ್ನೇಹಿತರು ಎಂಜಲು ಕೂಡ ನುಂಗುತ್ತಿರಲಿಲ್ಲ. ಈ ಕಾರಣದಿಂದಲೇ ಮುಸ್ಲಿಂ ಸಮುದಾಯದ ಬಗ್ಗೆ ಕುತೂಹಲ ಹುಟ್ಟಿಕೊಂಡಿತ್ತು. ಅದಕ್ಕಾಗಿ ನಾನು ಹದಿಸ್‌ ಹಾಗೂ ಕುರಾನ್‌ ಅನ್ನು ಓದಿದೆ. ಇವೆಲ್ಲವೂ ನನ್ನ ಆಸಕ್ತಿಗಾಗಿ ಓದಿದ್ದೆ ಎಂದು ಹೇಳಿದ್ದಾರೆ.

ಒಬ್ಬ ಉತ್ತಮ ಹಿಂದುವಾದವನು ಉತ್ತಮ ಮುಸ್ಲಿಂ ಹಾಗೂ ಉತ್ತಮ ಕ್ರಿಶ್ಚಿಯನ್‌, ಉತ್ತಮ ಪಾರ್ಸಿ, ಉತ್ತಮ ಬೌದ್ಧರನ್ನೂ ನೀನು ಗೌರವಿಸಬೇಕು. ಬೇರೆ ಧರ್ಮಗಳಲ್ಲಿರುವ ಭಿನ್ನತೆಯನ್ನು ನಾನು ಗೌರವಿಸದೇ ಇದ್ದರೆ, ಅದಕ್ಕೆ ಮೌಲ್ಯ ನೀಡದೇ ಹೋದರೆ ನಾನು ಉತ್ತಮ ಹಿಂದು ಎನಿಸಿಕೊಳ್ಳಲಾರೆ. ಪ್ರತಿ ಹಂತದಲ್ಲೂ ನಾನು ಹಿಂದು ಧರ್ಮದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದೇನೆ. ಅದರೊಂದಿಗೆ ಕಳೆದ ಮೂರು ವರ್ಷದಿಂದ ತಮಿಳುನಾಡು ಬಿಜೆಪಿ ವತಿಯಿಂದಲೇ ಇಫ್ತಾರ್‌ ಆಯೋಜನೆ ಮಾಡುತ್ತಿದ್ದೇವೆ. ಬಿಜೆಪಿ ಇಫ್ತಾರ್‌ ಆಯೋಜನೆ ಮಾಡ್ತಿದ್ಯಾ ಎಂದು ಎಲ್ಲರೂ ಕೇಳುತ್ತಾರೆ? ಅದಕ್ಕೆ ನಾನು ಯಾಕೆ ಮಾಡಬಾರದು ಎಂದೇ ಕೇಳುತ್ತೇನೆ. ನಮ್ಮ ಪಕ್ಷದಲ್ಲೂ ಮುಸ್ಲಿಂಮರಿದ್ದಾರೆ ಅವರಿಗಾಗಿ ಆಯೋಜನೆ ಮಾಡುತ್ತೇನೆ ಎಂದು ಹೇಳಿದ್ದೆ ಎಂದರು.

ನಾನು ಮುಸ್ಲಿಂ ಟೋಪಿ ಧರಿಸೋದಿಲ್ಲ. ಹಾಗಂತ ನನ್ನ ಮುಸ್ಲಿಂ ಸ್ನೇಹಿತನಿಗೂ ವಿಭೂತಿ ಹಚ್ಚಿಕೋ ಎಂದು ನಾನು ಹೇಳೋದಿಲ್ಲ. ಫೋಟೋಗಾಗಿ ಕೇವಲ 10 ಸೆಕೆಂಡ್‌ಗೆ ನಾನು ಟೋಪಿ ಧರಿಸಿ, ನೀವೆಲ್ಲಾ ನನ್ನ ಸ್ನೇಹಿತರು ಎಂದು ಅಪ್ಪಿಕೊಳ್ಳೋಕೆ ನನಗೆ ಆಗೋದಿಲ್ಲ. ಅಂಥ ರಾಜಕಾರಣಿಯೂ ನಾನಾಗಲಾರೆ. ವರ್ಷದ 365 ದಿನವೂ ನಾನು ನನ್ನ ಧರ್ಮವನ್ನು ಪಾಲಿಸುತ್ತೇನೆ. ಅದೇ ರೀತಿ ವರ್ಷದ 365 ದಿನವೂ ನಾನು ನಿಮ್ಮ ಧರ್ಮವನ್ನು ಗೌರವಿಸುತ್ತೇನೆ. ಇಂಥ ಬಂಧ ನಮ್ಮ ನಡುವೆ ಇರಬೇಕು. ಕೇವಲ 10 ಸೆಕೆಂಡ್‌ಗಾಗಿ ಟೋಪಿ ಧರಿಸಿ ಫೋಟೋಗೆ ಪೋಸ್‌ ನೀಡಿದರೆ, ಅದು ನನ್ನ ಮುಸ್ಲಿಂ ಸ್ನೇಹಿತರಿಗೆ ಮಾಡಿದ ಅವಮಾನ ಎಂದಾಗುತ್ತದೆ. ಮಸೀದಿಗೆ ಹೋಗುವಾಗ ನಾನು ಕೆಲವೊಂದು ಆಚರಣೆ ಮಾಡುತ್ತೇನೆ. ಅದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಸಾಕಷ್ಟು ಬಾರಿ ನಾನು ಮಸೀದಿಗೆ ಭೇಟಿ ನೀಡಿದ್ದೇನೆ. ಆದರೆ, ಟೋಪಿ ಹಾಕಿ ಅದನ್ನು ತೋರಿಸಿಕೊಂಡಿಲ್ಲ.ತುಷ್ಟೀಕರಣಕ್ಕಾಗಿ ನಾನು ಟೋಪಿ ಹಾಕಿಕೊಳ್ಳೋದಿಲ್ಲ. ಇದೇ ಕಾರಣಕ್ಕಾಗಿ ಇಂದು ನಮ್ಮ ದೇಶ ಇಲ್ಲಿದೆ. ಮೋದಿಜೀ ಟೋಪಿ ಧರಿಸಿಲ್ಲ ಎಂದಾದರೆ ಅವರು ಮುಸ್ಲಿಂ ವಿರೋಧಿ ಎನ್ನುತ್ತಾರೆ. ಆದರೆ, ಅದು ಹಾಗಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!