ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ಕೃಷ್ಣ ಅವರ ನಿಧನ ತೆಲುಗು ರಾಜ್ಯಗಳಲ್ಲಿ ದುಃಖವನ್ನು ತುಂಬಿದೆ. ಸಿನಿಮಾ ಹಾಗೂ ರಾಜಕೀಯ ಗಣ್ಯರ ಜತೆಗೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕೃಷ್ಣ ಜೊತೆಗಿನ ಅನುಭವವನ್ನು ನೆನೆದು ಚಿತ್ರರಂಗದ ಗಣ್ಯರು ಕಣ್ಣೀರಿಟ್ಟಿದ್ದಾರೆ. ಮಹೇಶ್ ಬಾಬು ಪುತ್ರಿ ಸಿತಾರ ಅಜ್ಜನ ಸಾವಿನ ಬಗ್ಗೆ ಭಾವುಕರಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಜ್ಜನೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುವ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಸಿತಾರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಜ್ಜ ಕೃಷ್ಣ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ವೀಕೆಂಡ್ ಡಿನ್ನರ್ ಈಗ ಮೊದಲಿನಂತೆ ಸಿಗುವುದಿಲ್ಲ. ನೀವು ನನಗೆ ಅನೇಕ ಅಮೂಲ್ಯವಾದ ವಿಷಯಗಳನ್ನು ಕಲಿಸಿದ್ದೀರಿ. ಯಾವಾಗಲೂ ನನ್ನ ಮುಖದಲ್ಲಿ ನಗು ಮಾಯವಾಗದಂತೆ ನೋಡಿಕೊಂಡಿದ್ದೀರಿ. ಇಂದಿನಿಂದ ಅವೆಲ್ಲವೂ ನಿನ್ನ ನೆನಪುಗಲಾಗಿರುತ್ತವೆ. ನೀನೇ ನನ್ನ ಹೀರೋ.. ಮುಂದೊಂದು ದಿನ ನೀನು ಹೆಮ್ಮೆ ಪಡುವ ಮಟ್ಟಕ್ಕೆ ತಲುಪುತ್ತೇನೆ ತಾತ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಸಿತಾರಾ ಅವರ ಪೋಸ್ಟ್ಗೆ ʻಬೀ ಸ್ಟ್ರಾಂಗ್ ಸೀತೂ ಪಾಪʼ ಎಂದು ನೆಟ್ಟಿಗರು ಧೈರ್ಯ ತುಂಬುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.