ಮೋದಿ ಓರ್ವ ಒರಟುತನದ ವ್ಯಕ್ತಿ ಎಂದುಕೊಂಡಿದ್ದೆ, ಆದರೆ…: ಗುಲಾಂ ನಬಿ ಆಜಾದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್‌ ಇಂದು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.

ನಾನು ಪ್ರಧಾನಿ ನರೇಂದ್ರ ಮೋದಿ ಓರ್ವ ಒರಟುತನದ ವ್ಯಕ್ತಿ ಎಂದುಕೊಂಡಿದ್ದೆ. ಆದ್ರೆ ಅವರಿಗೆ ಮಾನವೀಯತೆ ಇದೆ ಎಂದು 2006 ರ ಘಟನೆಯನ್ನು ನೆನೆದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂದು ನಾನು ರಾಜ್ಯಸಭೆಯಿಂದ ನಿರ್ಗಮಿಸುತ್ತಿದ್ದೇನೆ ಎಂಬ ಒಂದೇ ವಿಚಾರಕ್ಕೆ ಸಂಸತ್ತಿನಲ್ಲಿ ಮೋದಿ ಕಣ್ಣೀರು ಹಾಕಲಿಲ್ಲ. ನೀವು ಅವರ ಭಾಷಣದಲ್ಲಿದ್ದ ವಿಚಾರಗಳನ್ನು ಓದಿದರೆ ಇದು ಗೊತ್ತಾಗುತ್ತದೆ. ಅಲ್ಲಿ ಮೋದಿ ಒಂದು ಘಟನೆಯ ಬಗ್ಗೆ ಮಾತನಾಡುತ್ತಿದ್ದರು ಎಂದರು.

2006 ರಲ್ಲಿ ಕಾಶ್ಮೀರದಲ್ಲಿ ನಡೆದ ಗ್ರೆನೇಡ್‌ ದಾಳಿ

2006 ರಲ್ಲಿ ಕಾಶ್ಮೀರದಲ್ಲಿ ನಡೆದ ಗ್ರೆನೇಡ್‌ ದಾಳಿಯಲ್ಲಿ ಗುಜರಾತ್‌ನ ಕೆಲವು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಆಗ ಕಾಶ್ಮೀರದಲ್ಲಿ ನಾನು ಸಿಎಂ ಆಗಿದ್ದೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದರು. ಅವರು ನನಗೆ ಕರೆ ಮಾಡಿದರು. ಕಾಶ್ಮೀರದ ನಡೆಯುತ್ತಿದ್ದ ಭೀಕರ ದೌರ್ಜನ್ಯದ ಘಟನಾವಳಿಗಳೂ ನನ್ನನ್ನೂ ತೀವ್ರ ಬೇಸರಕ್ಕೆ ತಳ್ಳಿದ್ದವು. ಆ ಸಂದರ್ಭದಲ್ಲಿ ನಾನು ಅವರ ಜೊತೆ ಮಾತನಾಡಲಿಲ್ಲ. ಆದ್ರೆ ನಾನು ಅಳುತ್ತಿದ್ದ ಸನ್ನಿವೇಶವನ್ನು ನನ್ನ ಸಿಬ್ಬಂದಿ ಫೋನಿನ ಮೂಲಕವೇ ಅವರಿಗೆ ಕೇಳಿಸುತ್ತಿದ್ದರು. ಶ್ರೀನಗರದಲ್ಲಿ 2006ರ ಮೇ 25 ರಂದು ಈ ಘಟನೆ ನಡೆದಿದ್ದು, ಗುಜರಾತ್‌ ನಾಲ್ವರು ಪ್ರವಾಸಿಗರು ಬಲಿಯಾಗಿದ್ದರು. ಮತ್ತೆ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೋದಿ ನನ್ನ ಕಚೇರಿಗೆ ಪದೇ ಪದೇ ಫೋನ್‌ ಮಾಡುತ್ತಲೇ ಇದ್ದರು. ನಂತರದಲ್ಲಿ ಘಟನೆಯಲ್ಲಿ ಬಲಿಯಾದ ಜನರ ಮೃತದೇಹಗಳನ್ನು ವಿಮಾನದ ಮೂಲಕ ಸ್ಥಳಾಂತರಗೊಳಿಸಲಾಗುತ್ತಿತ್ತು. ಮೃತರ ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿತ್ತು, ಮನ ಕಲಕುವಂತಿತ್ತು. ಇದನ್ನು ಟೀವಿಯಲ್ಲಿ ನೋಡಿ ನನ್ನ ಕಣ್ಣಾಲಿಗಳೂ ತೇವಗೊಂಡಿದ್ದವು. ನನ್ನ ದೃಶ್ಯಗಳೂ ಟಿವಿಯಲ್ಲಿ ಪ್ರಸಾರವಾಗಿದ್ದವು. ಆದ್ರೆ ನಾನು ಆ ಸಂದರ್ಭದಲ್ಲಿ ಮೌನವಾಗಿಯೇ ಇದ್ದೆ ಎಂದರು.

ಇದಕ್ಕೂ ಮುನ್ನ ನಾನು, ಮೋದಿ ಓರ್ವ ಒರಟು ವ್ಯಕ್ತಿಯಾಗಿರಬಹುದು ಎಂದುಕೊಂಡಿದ್ದೆ. ಅವರಿಗೆ ಜನರ ಬಗ್ಗೆ ಅಷ್ಟೊಂದು ಕಾಳಜಿ ಬರಲು ಸಾಧ್ಯವಿಲ್ಲ. ಯಾಕಂದ್ರೆ ಪತ್ನಿಯಾಗಲೀ ಮಕ್ಕಳಾಗಲೀ ಅವರಿಗಿಲ್ಲ. ಆದ್ರೆ ಅಂದು ತನ್ನ ರಾಜ್ಯದ ಜನರಿಗಾಗಿ ಅವರು ಮಾನವೀಯತೆ ತೋರಿಸಿದ್ದರು ಎಂದು ಹಿಂದಿನ ಘಟನೆಯನ್ನು ಸ್ಮರಿಸುತ್ತಾ ವಿವರಣೆ ಕೊಟ್ಟರು.

ಇತ್ತ ಐದು ದಶಕಗಳ ಸಂಬಂಧವನ್ನು ಕಡಿದುಕೊಂಡು ಕಾಂಗ್ರೆಸ್ ಪಕ್ಷ ತೊರೆದ ದಿನದಿಂದ ದೇಶಾದ್ಯಂತ ಕಾಂಗ್ರೆಸ್‌ ನಾಯಕರು ಆಜಾದ್ ಮೇಲೆ ಮುಗಿಬಿದ್ದು ಟೀಕಾ ಸಮರ ನಡೆಸುತ್ತಿದ್ದಾರೆ. ಆಜಾದ್ ಅವರನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂಬ ಗಂಭೀರ ಆರೋಪಇತ್ತು.

ಆದರೆ ನಾನು ಬಿಜೆಪಿ ಜೊತೆ ಯಾವುದೇ ವ್ಯವಹಾರವಿಲ್ಲ. ಪಕ್ಷ ಸ್ಥಾಪನೆ ಮಾಡುವುದಿದ್ದರೆ ಅದು ಜಮ್ಮು ಕಾಶ್ಮೀರದಿಂದಲೇ ಆರಂಭವಾಗಲಿದೆ ಎಂದರು.

6 ದಿನ ನಿದ್ದೆ ಮಾಡಿಲ್ಲ

ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವುದಕ್ಕೂ ಮುಂಚಿತವಾಗಿ ನಾನು ಆರು ದಿನಗಳ ಕಾಲ ನಿದ್ದೆ ಮಾಡಿರಲಿಲ್ಲ. ಪಕ್ಷಕ್ಕಾಗಿ ನಾವು ರಕ್ತ ನೀಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದ ಜನರು ಇಂದು ನಿಷ್ಪ್ರಯೋಜಕರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಉತ್ತಮ ವಕ್ತಾರರು ಇಲ್ಲದಿರುವುದು ಬೇಸರದ ಸಂಗತಿ. ಸೋನಿಯಾ ಗಾಂಧಿ ಅವರ ಬಗ್ಗೆ ನನಗೆ 30 ವರ್ಷಗಳ ಹಿಂದೆ ಇದ್ದ ಗೌರವ ಈಗಲೂ ಇದೆ. ರಾಹುಲ್ ಗಾಂದಿ ಮೇಲೂ ನನಗೆ ಗೌರವವಿದೆ. ವೈಯಕ್ತಿಕವಾಗಿ ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವೆ. ನಾವು ಅವರನ್ನು ಯಶಸ್ವಿ ನಾಯಕನನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ, ಆದರೆ ಅವರು ಆಸಕ್ತಿ ಹೊಂದಿಲ್ಲ ಎಂದು ಆಜಾದ್ ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!