ದಿಗಂತ ವರದಿ ಹುಬ್ಬಳ್ಳಿ:
ನಮ್ಮ ಗುರುಗಳಾದ ಶಿರಹಟ್ಟಿ ಸಿದ್ಧರಾಮ ಸ್ವಾಮೀಜಿ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ಮಾತ್ರ ಹಿಂಪಡೆದಿದ್ದೇನೆ. ಆದರೆ ಧರ್ಮಯುದ್ಧ ಮುಂದುವರಿಯಲಿದೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಮಪತ್ರ ಹಿಂಪಡೆದಿರುವುದರ ಹಿಂದೆ ಯಾವುದೇ, ಯಾರದೇ ಒತ್ತಡ ಹಾಗೂ ಕೈವಾಡಗಳಿಲ್ಲ. ಎರಡು ಪಕ್ಷದವರು ಹಿಂಪಡೆಯುವಂತೆ ಒತ್ತಡ ಹಾಕಿದರು. ನಾನು ಅವರಿಗೆ ಸರಿಯಾಗಿ ಉತ್ತರಿಸಿದ್ದೇನೆ. ನಾಮಪತ್ರ ಹಿಂದಕ್ಕೆ ಪಡೆದಾಕ್ಷಣ ನನ್ನ ಹೋರಾಟ ನಿಲ್ಲುವುದಿಲ್ಲ. ನಾನು ಯಾವುದೇ ಪಕ್ಷದ ಪರ ಹಾಗೂ ವಿರುದ್ಧವಿಲ್ಲ ಎಂದು ತಿಳಿಸಿದರು.
ಸ್ಪರ್ಧೆಗಾಗಿ ಪೇಮೆಂಟ್ ಬಂದಿದೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಸಿದ ಶ್ರೀಗಳು, ಅವರ ಮಾತಿಗೆ ಅವರ ಪಕ್ಷದಲ್ಲಿ ಬೆಲೆ ಇಲ್ಲ. ನಾವೂ ಹೇಗೆ ಅವರು ಹೇಗೆ ಎಂಬುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅವರೊಬ್ಬ ಬ್ರೈನ್ ಲೆಸ್ ಬಾಡಿ ಇದ್ದಂತೆ ಎಂದರು.
ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿರುವಾಗ ಇಂತಹ ಹೇಳಿಕೆಗಳಿಗೆ ಲಗಾಮು ಹಾಕಲು ಅವರ ನಾಯಕರಿಂದ ಸಾಧ್ಯವಾಗಿಲ್ಲ. ಇದನ್ನು ನೋಡಿದರೆ ಈ ರೀತಿ ಮಾತನಾಡಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.