ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ನವಜೋತ್ ಸಿಂಗ್ ಸಿಧು
ಮಗಳು ರಾಬಿಯಾ ಪ್ರತಿಜ್ಞೆ ಮಾಡಿದ್ದಾರೆ.
ಅಮೃತಸರ (ಪೂರ್ವ) ಕ್ಷೇತ್ರದಲ್ಲಿ ಚುನಾವಣಾ ಅಗ್ನಿ ಪರೀಕ್ಷೆಗಿಳಿದ ಸಿಧು ಪರ ಪುತ್ರಿ ರಾಬಿಯಾ ಸಿಧು ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಬಿಯಾ, ಕಾಂಗ್ರೆಸ್ ಸಿಎಂ ಅಭ್ಯರ್ಥಿ ಮತ್ತು ಹಾಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ, ನನ್ನ ತಂದೆ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಚರಣ್ಜಿತ್ ಸಿಂಗ್ ಚನ್ನಿ ವಿರುದ್ಧ ವಾಗ್ದಾಳಿ
ತಾವು ಬಡವ ಎಂದು ಚರಣ್ಜಿತ್ ಸಿಂಗ್ ಚನ್ನಿ ಘೋಷಿಸಿಕೊಂಡಿದ್ದಾರೆ. ನಿಜವೇ? ಅವರ ಖಾತೆಗಳನ್ನು ಪರಿಶೀಲನೆ ಮಾಡಿದರೆ ಸತ್ಯಾಂಶ ತಿಳಿಯುತ್ತದೆ. ಚನ್ನಿ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದರೆ 133 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗುತ್ತದೆ ಎಂದು ರಾಬಿಯಾ ಸಿಧು ಆರೋಪಿಸಿದ್ದಾರೆ.
ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಸಿಧು ಹೆಸರನ್ನು ಘೋಷಿಸದ ಕಾರಣ ರಾಬಿಯಾ ಅಸಮಾಧಾನಗೊಂಡಿದ್ದಾರೆ. ಬಹುಶಃ ಹೈಕಮಾಂಡ್ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ ನೀವು ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲ ತಡೆಹಿಡಿಯಲು ಸಾಧ್ಯವಿಲ್ಲ. ಯಾರಿಗೆ ಪ್ರಾಮಾಣಿಕತೆ ಇರುವುದಿಲ್ಲವೋ ಅವರು ಖಂಡಿತ ಒಂದು ದಿನ ಕೆಳಗೆ ಬೀಳುತ್ತಾರೆ ಎಂದು ರಾಬಿಯಾ ಸಿಧು ಭವಿಷ್ಯ ನುಡಿದಿದ್ದಾರೆ.
ಪಂಜಾಬ್ನ ಜನರು ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುವುದಿಲ್ಲ, ಅವರು ಸತ್ಯಕ್ಕೆ ಮತ ಹಾಕುತ್ತಾರೆ. ನಮ್ಮ ರಾಜ್ಯದ ಜನರು ಸತ್ಯಕ್ಕೆ ಮಾತ್ರ ಮತ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ರಾಬಿಯಾ ಹೇಳಿದ್ದಾರೆ.