ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಲಿಪ್ರಾಂಪ್ಟರ್ ಅಥವಾ ಚೀಟಿಯನ್ನು ಬಳಕೆ ಮಾಡದೇ ಬಿಜೆಪಿ ನಾಯಕರು ಒಂದೇ ಸ್ಟ್ರೆಚ್ನಲ್ಲಿ ವಂದೇ ಮಾತರಂ ಗೀತೆಯನ್ನು ತಪ್ಪಿಲ್ಲದಂತೆ ಹಾಡಿ ತೋರಿಸಲಿ. ಆ ಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡಿದರೆ ಸಾಕು ಎಂದು ಕಾಂಗ್ರೆಸ್ ಸರ್ಕಾರ ಹೇಳಿರುವುದಕ್ಕೆ ಬಿಜೆಪಿ ವಿರೋಧಿ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಆರ್. ಅಶೋಕ್ ಅಥವಾ ಬಿ. ವೈ. ವಿಜಯೇಂದ್ರ ಒಂದೂ ತಪ್ಪಿಲ್ಲದಂತೆ, ಸ್ಕ್ರಿಪ್ಟ್ ಇಲ್ಲದಂತೆ ವಂದೇ ಮಾತರಂ ಹಾಡಿ ತೋರಿಸಲಿ. ನಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಹಿರಿಯರ ಮಾತಿಗೆ ಬೆಲೆ ಕೊಡೋದಿಲ್ವಾ?
ನಮ್ಮ ಹಿರಿಯರಾದ ಜವಾಹರ್ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಅವರು ವಂದೇ ಮಾತಾರಂನ ಎರಡು ಚರಣ ಹಾಡೋದು ಸಾಕು ಎಂದು ಹೇಳಿದ್ದಾರೆ. ಆದರೆ ಈಗಿನ ಬಿಜೆಪಿ ನಾಯಕರು ಹಾಗೂ ಪ್ರಧಾನಿ ಮೋದಿ ಇಡೀ ಹಾಡನ್ನು ಹಾಡಿ ಅಂತಿದ್ದಾರೆ. ಹಾಗಾದ್ರೆ ವಿಶ್ವನಾಯಕರಿಗಿಂತ ಇವರೇ ಶ್ರೇಷ್ಠರಾ? ಅವರ ಮಾತಿಗೆ ಬೆಲೆ ಇಲ್ಲವಾ? ಹಿರಿಯರು ಹೇಳಿದ್ದನ್ನು ಹೀಗಾ ಪಾಲಿಸೋದು? ಎಂದು ಪ್ರಶ್ನಿಸಿದ್ದಾರೆ.
ಎರಡು ಚರಣ ಮಾತ್ರ ಹಾಡೋದು
ಜನವರಿಯಲ್ಲಿ, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಬೇಕೆಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿತ್ತು. ವಂದೇ ಮಾತರಂನ 150ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರವು ಈ ನಿರ್ದೇಶನವನ್ನು ಹೊರಡಿಸಿತ್ತು. ಆದಾಗ್ಯೂ, ಆಗಸ್ಟ್ 19 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, 1937ರಲ್ಲಿ ವಂದೇ ಮಾತರಂ ಕುರಿತು ಕೈಗೊಂಡ ನಿರ್ಣಯಕ್ಕೆ ಬದ್ಧವಾಗಿರಲು ನಿರ್ಧರಿಸಲಾಗಿತ್ತು. ಈ ನಿರ್ಣಯದ ಪ್ರಕಾರ ಪಕ್ಷದ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.



