ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ರೈತರಿಗೂ, ಗ್ರಾಹಕರಿಗೂ ಬರೆ ಬಿದ್ದಿದೆ. ಬೆಳೆ ಬೆಳೆಯಲಾಗದೇ ರೈತ ಸಂಕಟಪಡುತ್ತಿದ್ದರೆ, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬರಗಾಲದ ಕಾರಣ ರಾಜ್ಯದಲ್ಲಿ ಅಕ್ಕಿ ಬೆಲೆ ಕ್ವಿಂಟಾಲ್ಗೆ ಬರೋಬ್ಬರಿ ಒಂದು ಸಾವಿರ ರೂಪಾಯಿಯಷ್ಟು ಏರಿಕೆಯಾಗಿದೆ. ಈ ವರ್ಷದ ಮಳೆಗಾಲ ಇನ್ನೇನು ಕಡೆಯ ಹಂತಕ್ಕೆ ಬಂದಿದ್ದು, ಈವರೆಗೂ ಉತ್ತಮ ಮಳೆ ಬಿದ್ದಿಲ್ಲ. ಇದರಿಂದಾಗಿ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ.
ಈಗಾಗಲೇ ಎರಡು ಬಾರಿ ಅಕ್ಕಿ ದರ ಏರಿಕೆ ಆಗಿದ್ದು, ಇದೀಗ ಇಂದಿನಿಂದ ಮತ್ತೆ ಅಕ್ಕಿ ದರ ಏರಿಕೆ ಆಗಿದೆ. ಈ ಬಾರಿ ಒಂದು ಕೆಜಿ ನಾರ್ಮಲ್ ಅಕ್ಕಿ ಮೇಲೆ 5 ರಿಂದ 10 ರುಪಾಯಿಯಷ್ಟು ಏರಿಕೆ ಆಗಿದ್ರೆ, ಕ್ವಾಲಿಟಿ ಅಕ್ಕಿ ಮೇಲೆ 10 ರಿಂದ 20 ರುಪಾಯಿ ಏರಿಕೆ ಆಗಿದ್ರೆ, ಒಂದು ಕ್ವಿಂಟಾಲ್ ಮೇಲೆ ಒಂದು ಸಾವಿರ ರುಪಾಯಿಯಷ್ಟು ಏರಿಕೆ ಆಗಿದೆ. ನಾರ್ಮಲ್ ಅಕ್ಕಿ ಚೀಲದ ಮೇಲೆ 200 ರುಪಾಯಿ, ಕ್ವಾಲಿಟಿ ಅಕ್ಕಿ ಮೇಲೆ 250 ರಿಂದ 300 ಏರಿಕೆಯಾಗಿದೆ.
ಭಾರತದಿಂದ ಬೇರೆ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ಭಾರತದಲ್ಲಿಯೇ ಅಕ್ಕಿಯ ಕೊರತೆ ಉಂಟಾಗಿದೆ. ಬೆಂಗಳೂರಿನಲ್ಲಿರುವ ಮಧ್ಯಮವರ್ಗದ ಜನ ಅಕ್ಕಿ ದರ ಹೆಚ್ಚಳದಿಂದ ರೋಸಿಹೋಗಿದ್ದಾರೆ. ನಿತ್ಯವೂ ಒಂದೊಂದು ಪದಾರ್ಥದ ಬೆಲೆ ಏರಿಕೆ ಮಾಡಿದರೆ ಬದುಕೋದು ಹೇಗೆ ಎಂದು ಬೇಸರಿಸಿಕೊಂಡಿದ್ದಾರೆ.



