ದಿಗಂತ ವರದಿ ಉಡುಪಿ:
ಸರ್ಕಾರದ ಆದೇಶವನ್ನು ಪಾಲಿಸಿ ಕಾಲೇಜಿನ ತರಗತಿಗೆ ಬನ್ನಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಡಿಬಾರ್ ಮಾಡುವ ಕೆಲಸವನ್ನು ನೂರಕ್ಕೆ ನೂರು ಮಾಡುತ್ತೇವೆ ಎಂದು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿಯರಿಗೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಉಡುಪಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಕೇರಳದಲ್ಲಿರುವ ಕಮ್ಯುನಿಸ್ಟ್ ಸರ್ಕಾರ ಹಿಜಾಬ್ ಗೆ ಅವಕಾಶ ಕೊಟ್ಟಿಲ್ಲ. ಮಹಾರಾಷ್ಟ್ರದಲ್ಲೂ ಹಿಜಾಬ್ ಗೆ ಅವಕಾಶ ಇಲ್ಲ. ಕರ್ನಾಟಕ ಹೈಕೋರ್ಟ್ ಉತ್ತಮ ತೀರ್ಪು ಕೊಡುವ ನಿರೀಕ್ಷೆಯಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಯಾವುದಾದರೂ ಕೊರತೆಗಳಿದ್ದರೆ ಹೇಳಿ, ನೀಗಿಸುತ್ತೇವೆ. ನಾವು ಯಾವುದೇ ರಾಜಿಯನ್ನು ಮಾಡುವುದಿಲ್ಲ.
ಕಾಲೇಜು ನಗರ ಭಾಗದಲ್ಲಿ ಇದ್ದರು ಗ್ರಾಮೀಣ ಭಾಗದ ಅತಿ ಹೆಚ್ಚು ವಿದ್ಯಾರ್ಥಿನಿಯರು ಬಂದು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶಾಸಕರ ನೇತೃತ್ವದಲ್ಲಿ ಹಲವಾರು ದಾನಿಗಳಿಂದ ಹಣ ಪಡೆದು ಕಾಲೇಜನ್ನು ನಡೆಸಿಕೊಂಡು ಹೋಗುತ್ತಿದ್ದೇನೆ. ಖಾಸಗಿ ಕಾಲೇಜಿಗೆ ಸರಿಸಾಟಿ ಎಂಬ ರೀತಿಯಲ್ಲಿ ಈ ಕಾಲೇಜನ್ನು ಕಟ್ಟಿ ಬೆಳೆಸಲಾಗಿದೆ.
ಇದೀಗ ಕೇವಲ 6 ವಿದ್ಯಾರ್ಥಿಗಳು ಕಾಲೇಜಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ಪೋಷಕರ ಸಭೆ ಕರೆದು ಹಲವು ಬಾರಿ ವಿನಂತಿ ಮಾಡಿಯಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಯಾವುದೇ ತಾರತಮ್ಯವನ್ನು ಈವರೆಗೆ ಮಾಡಿಲ್ಲ ಎಂದು ನುಡಿದರು.