ಹೊಸದಿಗಂತ ವರದಿ ಹುಬ್ಬಳ್ಳಿ:
ಭಗವಂತ ಎಲ್ಲ ಕಡೆಯಲ್ಲಿದ್ದಾನೆ. ಮನುಷ್ಯನ ಬದುಕು ಸುಖಮಯವಾಗಿರಬೇಕಾದರೆ ನಾವು ಮಾಡುವ ಪ್ರತಿಯೊಂದ ಕಾರ್ಯದಲ್ಲಿ ಭಗವಂತನನ್ನು ಕಾಣಬೇಕು ಎಂದು ಉಡಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಹೇಳಿದರು.
ಇಲ್ಲಿಯ ಕೇಶ್ವಾಪೂರದ ಶ್ರೀನಿವಾಸ ಗಾರ್ಡನ್ ನಲ್ಲಿ 29 ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ಶ್ರೀಮನ್ ನ್ಯಾಯಸುಧಾ ಮಂಗಳೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಸುಖದ ಬದುಕು ಪಡೆಯಲು ಯತ್ನಿಸಬೇಕು. ಅದು ಇನ್ನೊಬ್ಬರಿಗೆ ದುಃಖವಾಗಬಾರದು ಎಂದು ಆಚಾರ್ಯರು ಹೇಳುತ್ತಾರೆ. ಎಲ್ಲರಿಗೂ ಸುಖ ಸಿಗುವಂತೆ ಮಾಡುವ ಕಾರ್ಯಕ್ಕೆ ಭಗವಂತ ಅನುಗ್ರಹವಿರುತ್ತದೆ ಎಂದರು.
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಸುಬುಧೇಂದ್ರ ತೀರ್ಥರು ಮಾತನಾಡಿ,
ಮತಾಂತರ ಮಾಡುವ ಮೂಲಕ ಕೆಲವರು ಹಿಂದೂ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದು, ಎಲ್ಲರೂ ಸಂಘಟಕರಾಗಿ ಸಮುದಾಯದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎ. ಹರಿದಾಸ ಭಟ್ಟ ಮಾತನಾಡಿ, ಈ ದೇಶದಲ್ಲಿ ಅವೈದಿಕ ದರ್ಶನಗಳು ಪ್ರಾಬಲ್ಯ ಮೆರೆದಾಗ ವೈದಿಕ ದರ್ಶನ ಪ್ರತಿಪಾದಿಸಿದವರು ಶ್ರೀಶಂಕರಾಚಾರ್ಯರು. ಆತ್ಮನೆಂಬ ಒಂದು ಸತ್ಯವಾದ ತತ್ವ ಇದೆ ಎಂದು ಸಾಧಿಸಿದರು. ಜಗತ್ತು ಮಿಥ್ಯ ಎನ್ನುವ ಮೂಲಕ ಜಗತ್ತಿನ ಅಸ್ತಿತ್ವವನ್ನೂ ನಿರಾಕರಿಸಿದರು ಎಂದರು.
ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಸೇವಾಹಿ ಪರಮೋಧರ್ಮ ವಿಷಯವಾಗಿ ಮಾತನಾಡಿ, ಸೇವೆಯ ಮಾರ್ಗ ಶ್ರೇಷ್ಠ ವಾದುದು. ಅದು ಪ್ರೇಮಕ್ಕೆ ಬಹಳ ಹತ್ತಿರ. ಇಂಗ್ಲಿಷ್ ನ ಸರ್ವೀಸ್ ಗೆ ಹಾಗೂ ಕನ್ನಡದ ಸೇವೆಗೆ ಬಹಳ ಭಿನ್ನತೆಯಿದೆ. ಸೇವೆ ಕೊಡುವ ಆನಂದವನ್ನು ಅನುಭವಿಸುವ ಅಗತ್ಯ ವಿದೆ ಎಂದರು.