ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಅಕ್ರಮವಾಗಿ ಮೊಬೈಲ್ ಟವರ್ಗಳನ್ನು ಸ್ಥಾಪಿಸಿರುವ ಸಂಸ್ಥೆಗಳಿಗೆ ಈ ಕೂಡಲೇ ದಂಡ ವಿಧಿಸಿ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಕ್ರಮ ಟವರ್ ಅಳವಡಿಕೆ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಸಿಎಂಗೆ ಪತ್ರ ಬರೆದಿದ್ದಾರೆ. ಟೆಲಿಕಾಂ ಸೇವಾ ಪೂರೈಕೆದಾರರಿಗೆ ಸರ್ಕಾರ ದಂಡ ವಿಧಿಸಬೇಕು. ಈ ರೀತಿ ಮಾಡಿದರೆ ಸರ್ಕಾರಕ್ಕೆ ಏಳು ಸಾವಿರ ಕೋಟಿ ರೂಪಾಯಿ ಹಣ ಸಂಗ್ರಹವಾಗಲಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಕರ್ನಾಟಕ ಇನ್ಸ್ಟಾಲೇಷನ್ ಆಫ್ ನ್ಯೂ ಟೆಲಿಕಮ್ಯುನಿಕೇಷನ್ ಇನ್ಫ್ರಾಸ್ಟ್ರಕ್ಚರ್ ಟವರ್ಸ್ ನಿಯಮಾವಳಿ ಅನ್ವಯ ಟವರ್ ಅಳವಡಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷ ರೂಪಾಯಿ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಸಾವಿರ ರೂಪಾಯಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 35 ಸಾವಿರ ರೂಪಾಯಿ ನೀಡಬೇಕಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲೇ ಎಂಟು ಸಾವಿರ ಟವರ್ಗಳಿಗೆ ಇವುಗಳ ಪರಿಶೀಲನೆ ನಡೆಸಬೇಕು ಎಂದು ರಮೇಶ್ ಹೇಳಿದ್ದಾರೆ.
ಹಲವು ಟವರ್ಗಳು ಇನ್ಸ್ಟಾಲೇಷನ್ ಫೀಸ್ ಪಾವತಿಸದೇ ಸ್ಥಾಪಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಹಾಗಾಗಿ ಸಿಎಂ ದಂಡ ವಸೂಲಾತಿಗೆ ಆದೇಶ ನೀಡಿದ್ದಾರೆ.