ಹೊಸದಿಗಂತ ವರದಿ, ಕಲಬುರಗಿ
ಮಧ್ಯಾಮವಧಿ ಸಾಲದ ಬಡ್ಡಿಯಲ್ಲಿ ಶೇ.40ರಷ್ಟು ರಿಯಾಯಿತಿ ನೀಡುವ ಅವಕಾಶ ಕಲ್ಪಿಸಲಾಗಿರುವುದನ್ನು ರೈತರು ಸದುಪಯೋಗಪಡೆದುಕೊಳ್ಳಬೇಕೆಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಕೋರಿದ್ದಾರೆ.
ರೈತರಿಗೆ ಅನುಕೂಲವಾಗಲು ವನ್ ಟೈಮ್ ಸೆಟ್ಲೆಮೆಂಟ್( ಏಕ ಕಾಲಿಕ ಸಾಲ ತಿರುವಳಿ) ಯೋಜನೆ ಜಾರಿ ತರಲಾಗಿದೆ. ಈ ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ತರಲಾಗಿದ್ದು, ಬ್ಯಾಂಕ್ ನ ಅಭಿವೃದ್ಧಿ ಯಲ್ಲಿ ಪ್ರಮುಖವಾಗಿ ಹೊಸದಾಗಿ ಸಾಲ ವಿತರಿಸಲು ಮಧ್ಯಾಮವಧಿ ಸಾಲ ವಸೂಲಾಗುವುದು ಬಹು ಮುಖ್ಯವಾಗಿದೆ ಎಂದಿದ್ದಾರೆ.
ಸಾಲ ವಸೂಲಾತಿ ಸಂಬಂಧ ಈಗಾಗಲೇ ರಾಯಚೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಈಗಾಗಲೇ ನೊಟೀಸ್ ನೀಡಿದ್ದಲ್ಲದೇ ಸಿವಿಲ್ ಕೋಟ್೯ ದಲ್ಲಿ ಧಾವೆ ಹೂಡಿ ಆಸ್ತಿ ಹರಾಜಿಗೆ ಮುಂದಾಗಿದ್ದಾರೆ. ಆದ್ದರಿಂದ ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೇ ಸಾಲ ಮರುಪಾವತಿಸುವುದು ಸೂಕ್ತವಾಗಿದೆ. ನಬಾಡ್೯, ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ನಿಯಮಗಳನ್ನು ರೂಪಿಸಿ ಸರ್ಕಾರ ವು ಕೆಲವು ಷರತ್ತುಗಳೊಂದಿಗೆ ಓಟಿಎಸ್ ಗೆ ಅನುಮೋದನೆ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ.
ಹೀಗಾಗಿ ರೈತರು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ಉಪಾಧ್ಯಕ್ಷರು, ನಿರ್ದೆಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.