ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದ ಬಾಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಗುರುವಾರ ಮಾತುಕತೆ ನಡೆಸಿದರು.
ಒಂದು ಗಂಟೆ ನಡೆದ ಮಾತುಕತೆಯಲ್ಲಿ ಪೂರ್ವ ಲಡಾಖ್ನ ಗಡಿ ವಿವಾದ, ಭಾರತೀಯ ವಿದ್ಯಾರ್ಥಿಗಳನ್ನು ಚೀನಾಗೆ ಕಳುಹಿಸುವ ವಿಷಯ ಮತ್ತು ಎರಡೂ ದೇಶಗಳ ನಡುವೆ ನೇರವಿಮಾನ ಸಂಪರ್ಕ ಆರಂಭಿಸುವ ಬಗ್ಗೆ ಚರ್ಚಿಸಲಾಯಿತು.
ಜಿ-20 ಸಮಾವೇಶದ ಅಂಗವಾಗಿ ಜಿ-20 ದೇಶಗಳ ವಿದೇಶಾಂಗ ಸಚಿವರ ಮಧ್ಯೆ ಮಾತುಕತೆಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಭಾರತ ಹಾಗೂ ಚೀನಾ ಸಭೆ ನಡೆದಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ ಜೈಶಂಕರ್, ಗಡಿವಿವಾದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಬಾಕಿ ಉಳಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು ಎಂದು ತಿಳಿಸಿದ್ದಾರೆ.