ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ (WBBSE) 10ನೇ ತರಗತಿ ಪರೀಕ್ಷೆಯ (ಮಾಧ್ಯಮಿಕ್) ಪತ್ರಿಕೆಯಲ್ಲಿ ಭಾರತದ ಭೂಪಟದಲ್ಲಿ ‘ಆಜಾದ್ ಕಾಶ್ಮೀರ್’ (Azad Kashmir) ಎಂದು ಗುರುತಿಸಲು ವಿದ್ಯಾರ್ಥಿಗಳಿಗೆ ಕೇಳಿದ್ದು, ಇದೀಗ ವಿವಾದವನ್ನು(controversy) ಹುಟ್ಟುಹಾಕಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು ಈ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪರೀಕ್ಷೆ ಪತ್ರಿಕೆಯಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) “ಆಜಾದ್ ಕಾಶ್ಮೀರ” ಎಂದು ಉಲ್ಲೇಖಿಸಲಾಗಿದೆ. ಇತಿಹಾಸ ಪರೀಕ್ಷೆ ಪತ್ರಿಕೆಯ 132ನೇ ಪುಟದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಬ್ಲ್ಯುಬಿಬಿಎಸ್ಇ ಪ್ರತಿ ವರ್ಷ ಬೋರ್ಡ್ ಪರೀಕ್ಷೆಗೆ ಮುಂಚಿತವಾಗಿ ಪರೀಕ್ಷಾ ಪತ್ರಿಕೆಗಳ ಸಂಕಲನವನ್ನು ಬಿಡುಗಡೆ ಮಾಡುತ್ತದೆ. ಬೋರ್ಡ್ಗೆ ಸಂಯೋಜಿತವಾಗಿರುವ ವಿವಿಧ ಶಾಲೆಗಳಿಂದ ರಚಿಸಲಾದ 10 ನೇ ತರಗತಿಯ ಪೂರ್ವ-ಬೋರ್ಡ್ ಪ್ರಶ್ನೆಗಳನ್ನು ಸಾಮಾನ್ಯವಾಗಿ ಪರೀಕ್ಷಾ ಪತ್ರಿಕೆಗಳು ಒಳಗೊಂಡಿರುತ್ತವೆ. ರಾಮಕೃಷ್ಣ ಮಿಷನ್ ವಿವೇಕಾನಂದ ವಿದ್ಯಾಮಂದಿರ, ಮಾಲ್ಡಾ ಶಾಲೆಯಲ್ಲಿನ ಪರೀಕ್ಷಾ ಪತ್ರಿಕೆಯ ಪ್ರಶ್ನೆ ಪುಟ 132ನಲ್ಲಿ ಈ ಪ್ರಶ್ನೆ ಇದೆ.
ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಅವರು ಬಂಗಾಳ ಶಿಕ್ಷಣ ಸಚಿವರಲ್ಲಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಅದರಲ್ಲಿ ಸೂಕ್ಷ್ಮವಾದ ರಾಷ್ಟ್ರವಾದಿ ವಿರೋಧಿ ಧ್ವನಿ ಇದೆ. ಇದೆಲ್ಲವೂ ಪ್ರತ್ಯೇಕತಾವಾದಿ ಅಂಶಗಳ ಕಾರಣವನ್ನು ಉತ್ತೇಜಿಸುತ್ತದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.