ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ವಶಪಡಿಸಿಕೊಂಡ ನಾಲ್ಕು ಪ್ರದೇಶಗಳನ್ನು ರಷ್ಯಾ ತನ್ನ ದೇಶದಲ್ಲಿ ವಿಲೀನಗೊಳಿಸಿದೆ. ರಷ್ಯಾ ನಿರ್ಣಯವನ್ನು ಖಂಡಿಸಿ ವಿಶ್ವಸಂಸ್ಥೆಯಲ್ಲಿ ನಡೆದ ವೋಟಿಂಗ್ನಿಂದ ಭಾರತ ದೂರ ಉಳಿದಿದೆ. ಈ ಕುರಿತು ಸ್ಪಷ್ಟನೆ ನೀಡಿದ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, ಉಕ್ರೇನ್ನಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಭಾರತವು ತೀವ್ರವಾಗಿ ವಿಚಲಿತವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮತದಾನದಲ್ಲಿ ಭಾರತವು ಗೈರುಹಾಜರಾಗಿದ್ದಕ್ಕೆ ಹಲವು ಭಿನ್ನಾಭಿಪ್ರಾಯಗಳು ಹುಟ್ಟುಕೊಂಡಿದ್ದು, ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯೊಂದೇ ದಾರಿ ಎಂಬುದನ್ನು ಒತ್ತಿ ಹೇಳಿದರು.
ರಷ್ಯಾ ಕಾನೂನುಬಾಹಿರ ಜನಾಭಿಪ್ರಾಯ ಮತ್ತು ಉಕ್ರೇನಿಯನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆ ಕರೆ ನೀಡಿತು. 15 ರಾಷ್ಟ್ರಗಳ ಯುಎನ್ ಸೆಕ್ಯುರಿಟಿ ಕೌನ್ಸಿಲ್ ರಷ್ಯಾ ಉಕ್ರೇನ್ನ ಗಡಿಯೊಳಗಿನ ಪ್ರದೇಶಗಳಲ್ಲಿ ಅಕ್ರಮ ಜನಾಭಿಪ್ರಾಯ ಸಂಗ್ರಹಣೆಯನ್ನು ತೀವ್ರವಾಗಿ ಖಂಡಿಸಿದೆ. ಉಕ್ರೇನ್ನಲ್ಲಿ ನಡೆದ ಜನಾಭಿಪ್ರಾಯವನ್ನು ಖಂಡಿಸುವ ನಿರ್ಣಯಗಳ ಮೇಲೆ ಯುಎನ್ ಭದ್ರತಾ ಮಂಡಳಿಯು ಮತ ಚಲಾಯಿಸಿತು, ಭಾರತ, ಚೀನಾ, ಗ್ಯಾಬೊನ್ ಮತ್ತು ಬ್ರೆಜಿಲ್ ಮತದಾನದಿಂದ ದೂರ ಉಳಿದವು.
ಮತದಾನದಿಂದ ದೂರ ಉಳಿದ ಬಗ್ಗೆ ವಿವರಿಸಿದ ಕಾಂಬೋಜ್, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಸಂಬಂಧಪಟ್ಟ ಕಡೆಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮರ್ಕಂಡ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ನೀಡಿದ ಸಲಹೆಯನ್ನು ಉಲ್ಲೇಖಿಸಿದರು. ʻಇದು ಯುದ್ಧದ ಯುಗವಾಗಲು ಸಾಧ್ಯವಿಲ್ಲʼ ಸಂಘರ್ಷ ಪರಿಹಾರಕ್ಕಾಗಿ ಶಾಂತಿ ಮಾತುಕತೆಗಳನ್ನು ಶೀಘ್ರವಾಗಿ ಪುನರಾರಂಭಿಸುವ ಭರವಸೆಯನ್ನು ಭಾರತ ಹೊಂದಿದೆ. ಯುದ್ಧ ಆರಂಭವಾದಾಗಿನಿಂದಲೂ ಭಾರತದ ನಿಲುವು ಸ್ಪಷ್ಟವಾಗಿದೆ ಮತ್ತು ಸ್ಥಿರವಾಗಿದೆ ಎಂಬ ಮಾತನ್ನು ಹೇಳಿದರು.
ರಷ್ಯಾ ಉಕ್ರೇನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರಪಂಚದಾದ್ಯಂತ ವ್ಯಾಪಕ ಟೀಕೆಗಳನ್ನು ಹುಟ್ಟುಹಾಕಿದೆ. ಯುನೈಟೆಡ್ ಸ್ಟೇಟ್ಸ್ ರಷ್ಯಾದ ಮೇಲೆ ತ್ವರಿತ ಮತ್ತು ಮತ್ತಷ್ಟು ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿತು.