ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ಸಿದ್ಧ ಎಂದು ಭಾರತ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕನಿಷ್ಠ 1,000 ಜನರು ಸಾವನ್ನಪ್ಪಿದ್ದು, ಹಲವು ಮನೆಗಳು ಕುಸಿದು ಅಪಾರ ಆಸ್ತಿ ಹಾಗೂ ಪ್ರಾಣ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಅಫ್ಘನ್ ಜನರ ನರೆವಿಗೆ ಭಾರತ ನಿಂತಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಭೂಕಂಪದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರು ಹಾಗೂ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಭಾರತ ಸರ್ಕಾರ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಅಫ್ಘಾನಿಸ್ತಾನ ಜನರಿಗೆ ಸಹಾಯ ಮಾಡಲು ನಾವು ಸಿದ್ಧವಾಗಿದ್ದೇವೆ ಎಂದರು.
ಏತನ್ಮಧ್ಯೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅಫ್ಘಾನಿಸ್ತಾನದ ಸಹಾಯಕ್ಕಾಗಿ ಈಗಾಗಲೇ ಭಾರತದಿಂದ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಕಳುಹಿಸಲಾಗಿದೆ. ಮೊದಲ ರವಾನೆಯು ಕಾಬೂಲ್ ತಲುಪಿದೆ ಎಂದರು. ಅಲ್ಲಿರುವ ನಮ್ಮ ಭಾರತೀಯ ಅಧಿಕಾರಿಗಳು ಸರಕನ್ನು ಸ್ವೀಕರಿಸಿದ್ದು, ಬಾಕಿಯಿರುವ ನೆರವು ಕೂಡ ಶೀಘ್ರದಲ್ಲೇ ರವಾನೆ ಮಾಡಲಾಗುವುದು ಎಂದು ವಿವರಿಸಿದರು.
ಭಾರತವು ಈಗಾಗಲೇ 30,000 ಮೆಟ್ರಿಕ್ ಟನ್ ಗೋಧಿ, 13 ಟನ್ ಔಷಧಗಳು ಮತ್ತು 5 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ.
The first consignment of India's earthquake relief assistance for the people of Afghanistan has reached Kabul; handed over by the Indian team there, and further consignment to follow, says the Ministry of External Affairs. pic.twitter.com/4AxoJwWinq
— ANI (@ANI) June 23, 2022