ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಯುವಜನೋತ್ಸವದ 7,500 ಪ್ರತಿನಿಧಿಗಳಿಗೆ ಧಾರವಾಡದ ಸುಪ್ರಸಿದ್ಧ ಪೇಡಾ ನೀಡುವ ಮೂಲಕ ಉತ್ಸವ ಸ್ಮರಣೀಯವಾಗಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಧಾರವಾಡ ನೆನಪು ಸ್ಮರಿಸಲು ಮಿಶ್ರಾ ಪೇಡಾ ಉದ್ಯಮಿಗಳು ದೇಶದ ವಿವಿಧ ಭಾಗಗಳಿಂದ ಬರುವ ಪ್ರತಿನಿಧಿಗಳಿಗೆ ಉಚಿತ ಪೇಡಾ ವಿತರಣೆಗೆ ಸಜ್ಜಾಗಿದ್ದು, ಬಹುತೇಕ ಪ್ಯಾಕಿಂಗ್ ಪೂರ್ಣಗೊಳಿಸಿದೆ.
ಉತ್ಸವವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಕೆನರಾ ಬ್ಯಾಂಕ್ ಮತ್ತು ಟಾಟಾ ಹಿಟಾಚಿ ಸಂಸ್ಥೆ ತಲಾ ಎರಡು ಸಾವಿರ ಸ್ಟೀಲ್ ಬಾಟಲ್, ವೈನ್ ಅಸೋಸಿಯೇಷನ್ 10 ಲಕ್ಷ ಕುಡಿಯುವ ನೀರಿನ ಬಾಟಲ್ ನೀಡಿ, ಜಿಲ್ಲಾಡಳಿತಕ್ಕೆ ಕೈಜೋಡಿಸುತ್ತಿವೆ.
ವರ್ಣರಂಜಿತ ಉತ್ಸವಕ್ಕೆ ಹೆಸ್ಕಾಂ ಉಚಿತ ವಿಶೇಷ ದೀಪಾಲಂಕಾರ ಮಾಡುತ್ತಿದೆ. ಸರ್ಕಾರದ ಕ್ರೆಡೆಲ್ ಸಂಸ್ಥೆ ಆರ್ಥಿಕ ಸಹಾಯ ಮಾಡಿದರೆ, ಸರ್ಕಾರೇತರ ಸಂಸ್ಥೆ ಪ್ರತಿನಿಧಿಗಳಿಗೆ ಸ್ವಾಗತ ಕಿಟ್ ಒದಗಿಸಿದೆ.
ಹೋಟೆಲ್ ಅಸೋಸಿಯೇಷನ್ ಪ್ರತಿನಿಧಿಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಒದಗಿಸಿದೆ. ಚೇಂಬರ್ ಆಫ್ ಕಾಮರ್ಸ್ ಸಾವಿರ ಬಕೆಟ್ ನೀಡಿದೆ. ವಿವಿಧ ಕಂಪನಿಗಳು 5000 ಯೋಗ ಮ್ಯಾಟ್ ಪೂರೈಸಿದೆ.
ಜಿಲ್ಲಾಡಳಿತಕ್ಕೆ ನೆರವು ನೀಡಿದ ಸಂಘ ಸಂಸ್ಥೆಗಳಿಗೆ, ಉದ್ಯಮಿಗಳಿಗೆ, ಸಕ್ರಿಯವಾಗಿ ಪಾಲ್ಗೊಂಡ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಜಿಲ್ಲಾಡಳಿತ ಕೃತಜ್ಞತೆಯಿಂದ ಸ್ಮರಿಸಿದೆ.