ಹೊಸದಿಗಂತ ವರದಿ,ಮೈಸೂರು:
ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಮುಡಾದಿಂದ ಮಂಜೂರಾಗಿರುವ ಸಿಎ ನಿವೇಶನದ ಮಂಜೂರಾತಿ ಪತ್ರವನ್ನು ಸಂಘಕ್ಕೆ ನೀಡಲು ಮುಡಾ ಆಯುಕ್ತರಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ನೇತೃತ್ವದ ನಿಯೋಗ ಶನಿವಾರ ಶಾರದಾದೇವಿ ನಗರದ ನಿವಾಸದಲ್ಲಿ ಭೇಟಿ ಮಾಡಿ ಸಲ್ಲಿಸಿದ ಮನವಿ ಸ್ವೀಕರಿಸಿ ಸಿಎಂ, ಅತಿ ಶೀಘ್ರವಾಗಿ ಈ ಬಗ್ಗೆ ಕ್ರಮವಹಿಸುವುದಾಗಿ ಹೇಳಿದರು.
ಸಂಘಕ್ಕೆ ಮುಡಾದಿಂದ ನಿಯಮಾನುಸಾರ ಸಿಎ ನಿವೇಶನ ಮಂಜೂರಾಗಿದ್ದರೂ ಮಂಜೂರಾತಿ ಪತ್ರ ನೀಡುವಲ್ಲಿ ವಿಳಂಬವಾಗಿದೆ. ಪತ್ರ ಬೇಗ ಕೊಡಿಸಿದಲ್ಲಿ ತಮ್ಮಿಂದಲೇ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕೆಂದು ಆಪೇಕ್ಷೆ ಪಟ್ಟಿದ್ದೇವೆ. ಈ ಸಂಬಂಧ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಅಧ್ಯಕ್ಷರಾದ ರವಿಕುಮಾರ್ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.
ಎಲ್ಲವನ್ನು ಆಲಿಸಿದ ಸಿಎಂ ಕೊನೆಯಲ್ಲಿ ಮಾತನಾಡಿ, ಮಂಜೂರಾತಿ ಪತ್ರ ಕೊಡುವಂತೆ ಮುಡಾ ಆಯುಕ್ತರಿಗೆ ಸೂಚಿಸುತ್ತೇನೆ. ಅಗತ್ಯ ಅನುದಾನ ನೀಡಲು, ಶಂಕುಸ್ಥಾಪನೆ ನೆರವೇರಿಸಲು ಕ್ರಮವಹಿಸುವುದಾಗಿ ಹೇಳಿದರು.
ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಕಾರ್ಯದರ್ಶಿ ಪಿ.ರಂಗಸ್ವಾಮಿ. ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯ ಆರ್.ಕೃಷ್ಣ, ಛಾಯಾಗ್ರಾಹಕ ಸುತ್ತೂರು ನಂಜುಂಡನಾಯ್ಕ ಮತ್ತಿತರರು ಹಾಜರಿದ್ದರು.