ಆಂತರಿಕ ಒಳಜಗಳದಿಂದ ಕಾಂಗ್ರೆಸ್‌ ಬೀದಿಗೆ ಬಂದು ನಿಂತಿದೆ-ಈರಣ್ಣ ಕಡಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ಒಳಜಗಳದಿಂದಲೇ ಬೀದಿಗೆ ಬಂದು ನಿಂತಿದೆ. ನೂರು ಸುಳ್ಳು ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅದಕ್ಕೆ ಅಷ್ಟೇ ತೀವ್ರತೆಯಿಂದ ನಾವೆಲ್ಲರೂ ಉತ್ತರ ಕೊಡಬೇಕಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

ದಾವಣಗೆರೆಯಲ್ಲಿ ಇಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ನಡೆದ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಗೆ  ಕರ್ನಾಟಕಕ್ಕೆ ಹೆಚ್ಚು ದಿನಗಳನ್ನು ಮೀಸಲಿಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ದಯನೀಯ ಸ್ಥಿತಿಗೆ ಕಾಂಗ್ರೆಸ್‌ ಬಂದು ತಲುಪಿದೆ ಎಂದರು.

ಜನಪರ ಕಾಳಜಿಯುಳ್ಳ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ಅಮಿತ್ ಶಾ ಅವರಂಥ ಸಮರ್ಥ ನಾಯಕರ ತಂಡವೇ ನಮ್ಮ ಪಕ್ಷಕ್ಕಿದೆ. ಗಾಂಧಿ ಪರಿವಾರದಿಂದ ಹೊರತಾದ ಅಧ್ಯಕ್ಷರ ಆಯ್ಕೆಯ ಸಂದೇಶ ಕೊಡಲು ಆ ಪಕ್ಷ ಮುಂದಾಗಿದೆ. ಪಕ್ಷದ ಅಧ್ಯಕ್ಷತೆ ಬೇಡ ಎನ್ನುವ ರಾಹುಲ್ ಗಾಂಧಿ ಯಾತ್ರೆಗೆ ಮುಂದಾಗಿದ್ದಾರೆ. ಭಾರತವನ್ನು ಕಾಂಗ್ರೆಸ್‌ ಮುಖಂಡರು ಒಡೆದಷ್ಟು ಬೇರೆ ಯಾರೂ ದೇಶ ಒಡೆದಿಲ್ಲ. ದೇಶ ಒಡೆದು ಮೂರು ತುಂಡು ಮಾಡಿದ ಕೀರ್ತಿ ರಾಹುಲ್ ಅವರ ಮುತ್ತಾತ ನೆಹರೂ ಅವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.

ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಅವರು ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮೋರ್ಚಾವು ಸರ್ಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

2023ರ ಅಸೆಂಬ್ಲಿ ಚುನಾವಣೆಯ ಸವಾಲು ನಮ್ಮ ಮುಂದಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕಾರ್ಯತಂತ್ರ ನಮ್ಮದಾಗಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!