ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿದ್ದು, ಕಾಂಗ್ರೆಸ್ ಈಗಾಗಲೇ ವಿಪಕ್ಷಗಳ ಜೊತೆ ಸೇರಿ ಇಂಡಿಯಾ ಮೈತ್ರಿ ಒಕ್ಕೂಟ ರಚನೆ ಮಾಡಿದೆ.
ಇತ್ತ ಬಿಜೆಪಿ ಎನ್ಡಿಎ ಒಕ್ಕೂಟ ಬಲಪಡಿಸಲು ಮುಂದಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಮಾಡಿಕೊಂಡಿದೆ. ಇದೀಗ ಮತ್ತೊಂದು ಪ್ರಮುಕ್ಷ ಪಕ್ಷ ಬಿಜೆಪಿ ಜೊತೆ ಮೈತ್ರಿ ಸೂಚನೆ ನೀಡುತ್ತಿದೆ.
ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇೃತ್ವದ ಬಿಜೆಡಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ವಿದೇಶಾಂಗ ನೀತಿ, ದೇಶದ ಕಟ್ಟಕಡೆಯ ಪ್ರಜೆಗೆ ಮೂಲಭೂತ ಸೌಕರ್ಯ ಸಿಗಲು ರೂಪಿಸಿರುವ ಯೋಜನೆಗಳು, ಭ್ರಷ್ಟಾಚರ ರಹಿತ ಆಡಳಿತ ಸೇರಿದಂತೆ ಹಲವು ವಿಚಾರಗಳ ಕುರಿತು ನವೀನ್ ಪಟ್ನಾಯಕ್ ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ಇದೇ ವೇಳೆ ಒಡಿಶಾದ ಅಭಿವೃದ್ಧಿ, ಒಡಿಶಾದ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಕೇಂದ್ರದ ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿದ್ದೇವೆ. ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಬಂಧ ಉತ್ತಮವಿದ್ದರೆ ಅಭಿವೃದ್ಧಿ ಕೆಲಸಗಳು ಸುಲಭವಾಗುತ್ತದೆ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ಪ್ರಧಾನಿ ಮೋದಿ ಆಡಳಿತದ ಕುರಿತು 10ರಲ್ಲಿ 8 ಅಂಕ ನೀಡಿದ್ದಾರೆ. ಪ್ರಮುಖವಾಗಿ ಭ್ರಷ್ಟಾಚಾರ ರಹಿತ ಆಡಳಿತ ಈ ದೇಶಕ್ಕೆ ಬೇಕಾಗಿದೆ. ಅದನ್ನು ಮೋದಿ ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತದಲ್ಲಿ ಮಾತ್ರ ದೇಶದ ಪ್ರತಿಯೊಬ್ಬ ಪ್ರಜೆಗೆ ಸೌಲಭ್ಯಗಳು ತಲುಪಲು ಸಾಧ್ಯ ಎಂದು ಮೋದಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಬಿಲ್ ಅತ್ಯಂತ ಮಹತ್ವದ ಹೆಜ್ಜೆ. ಈ ರೀತಿಯ ಐತಿಹಾಸಿಕ ಮಸೂದೆಗಳಿಗೆ ಬಿಜೆಡಿ ಸದಾ ಬೆಂಬಲ ನೀಡಲಿದೆ. ನನ್ನ ತಂದೆ ಬಿಜು ಪಟ್ನಾಯಕ್ 90ರ ದಶಕದಲ್ಲಿ ಮಹಿಳೆಯರಿಗೆ ಸ್ಥಳೀಯ ಚುನಾವಣೆಯಲ್ಲಿ ಶೇಕಡಾ 33 ರಷ್ಟು ಮೀಸಲಾತಿ ಘೋಷಿಸಿದ್ದರು. ನಾವು ಅದನ್ನು ಶೇಕಡಾ 50ಕ್ಕೆ ಏರಿಸಿದ್ದೇವೆ ಎಂದು ಪಟ್ನಾಯಕ್ ಹೇಳಿದ್ದಾರೆ.