ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಸಿ ಮದುವೆಯಾದ ಯುವತಿ ಮದುವೆ ನಂತರ ಬದಲಾಗಿದ್ದು, ಗಂಡನಿಗೆ ನೀಡಿದ ಕಿರುಕುಳ ತಡೆಯಲಾರದೆ ನವವಿವಾಹಿತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸನದ ಚನ್ನರಾಯಪಟ್ಟಣ ಸಮೀಪದ ಕರಿಯಪ್ಪನಗುಡಿ ಗ್ರಾಮದ ಕಿರಣ್ ಇತ್ತೀಚೆಗಷ್ಟೇ ಸ್ಪಂದನಾ ಎಂಬಾಕೆಯನ್ನು ಮದುವೆಯಾಗಿದ್ದ.
ಪ್ರೀತಿಸಿ ಆಕೆಯನ್ನು ಹಿರಿಯರ ಸಮ್ಮುಖದಲ್ಲಿ ವರಿಸಿದ್ದ. ಆದರೆ ಸ್ಪಂದನಾ, ಆಕೆಯ ತಂದೆ ತಾಯಿ ಕಿರಣ್ಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ದುಡ್ಡು ಕೊಡು ಎಂದು ಪೀಡಿಸುತ್ತಿದ್ದರು.
ಇಷ್ಟೇ ಅಲ್ಲದೆ ಸುಳ್ಳು ವರದಕ್ಷಿಣೆ ಕೇಸ್ ದಾಖಲಿಸಿ ಕಿರಣ್ರನ್ನು ಜೈಲಿಗೂ ಅಟ್ಟಿದ್ದರು. ಇದಕ್ಕೂ ಮುನ್ನವೇ ಸ್ಪಂದನಾ ಗಂಡನ ಮನೆ ಬಿಟ್ಟು ತಾಯಿ ಮನೆ ಸೇರಿದ್ದಳು. ಜೀವನಕ್ಕಾಗಿ ಕಿರಣ್ ಸ್ವಂತ ಬೇಕರಿ ಇಟ್ಟುಕೊಂಡಿದ್ದ. ಬೇಕರಿ ಬಳಿ ಸ್ಪಂದನಾ ತಂದೆ ತಾಯಿ ಬಂದು ಗಲಾಟೆ ಮಾಡಿದ್ದು, ವ್ಯಾಪಾರಕ್ಕೂ ಕಲ್ಲು ಹಾಕಿದ್ದರು. ಈ ಎಲ್ಲ ವಿಷಯಗಳಿಂದ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಾಗಿದೆ.