ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu) ರೈತರ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ರೈತರ ಪ್ರತಿಭಟನೆ (Farmers Protest) ನಡುವೆ ಇಂದು ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಧು, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವುದು ಹಸಿ ಸುಳ್ಳು ಎಂದು ಟೀಕಿಸಿದ್ದಾರೆ. ‘ರೈತರಿಗೆ ಎಂಎಸ್ಪಿ ಮತ್ತು ಆದಾಯವನ್ನು ಎರಡು ಪಟ್ಟು ಹೆಚ್ಚಿಸುತ್ತೇವೆ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಇದಕ್ಕಿಂತ ದೊಡ್ಡ ಸುಳ್ಳು ಇದೆಯೇ?’ ಎಂದು ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿ ಈ ಹಿಂದೆ ರೈತರ ಆದಾಯ ದ್ವಿಗುಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು. ಹಾಗೆಯೇ, ಕೆಲ ಬೆಳೆಗಳಿಗೆ ಯುಪಿಎ ಅವಧಿಯಲ್ಲಿ ಇದ್ದುದಕ್ಕಿಂತಲೂ ಎಂಎಸ್ಪಿ ಈಗ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೆಲ ಬಿಜೆಪಿ ನಾಯಕರು ಹೇಳಿದ್ದುಂಟು. ಈ ಹಿನ್ನೆಲೆಯಲ್ಲಿ ನವಜ್ಯೋತ್ ಸಿಂಗ್ ಸಿಧು ಈ ಅಭಿಪ್ರಾಯಗಳನ್ನು ಹಸಿ ಸುಳ್ಳು ಎಂದು ಬಣ್ಣಿಸಿದ್ದು, ‘ಸರ್ಕಾರ ಎಂಎಸ್ಪಿಯನ್ನು 40 ರೂ ಹೆಚ್ಚಿಸಿ, ರೈತರಿಂದ 400 ರೂ ಕಸಿದುಕೊಳ್ಳುತ್ತಿದೆ,’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸರ್ಕಾರ ರಚನೆ ಆದಾಗಿನಿಂದ ಸಾಸಿವೆ ಎಣ್ಣೆ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಗಳೂ ಹೆಚ್ಚಾಗಿವೆ. ಬಡವರಿಗೆ ಪ್ರತಿಯೊಂದು ವಸ್ತುವೂ ದುಬಾರಿಯಾಗಿ ಹೋಗಿದೆ. ಅಗತ್ಯ ವಸ್ತುಗಳನ್ನು ಖರೀದಿಸುವುದೂ ಈಗ ಕಷ್ಟಕರವಾಗಿದೆ.ಡೀಸೆಲ್ ಬೆಲೆ 2013ರಲ್ಲಿ ಲೀಟರ್ಗೆ 38 ರೂ ಇದ್ದದ್ದು ಈಗ ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಾಗಿದೆ. ಇದೆಲ್ಲದರಿಂದ ಕೃಷಿ ಉತ್ಪಾದನೆಗೆ ಆಗುವ ವೆಚ್ಚ ಬಹಳ ಹೆಚ್ಚಾಗಿದೆ. ರೈತರಿಗೆ ಎಂಎಸ್ಪಿ ಹೆಚ್ಚಾಗಿರುವುದು ಮಾತ್ರ 40 ರೂ ಅಷ್ಟೇ. ಸರ್ಕಾರ ರೈತರಿಗೆ 40 ರೂ ಕೊಟ್ಟು, 400 ರೂ ಕಸಿದುಕೊಳ್ಳುತ್ತೆ,’ ಎಂದು ಸಿಧು ವಿವರಣೆ ನೀಡಿದ್ದಾರೆ.