ಹೊಸದಿಗಂತ ವರದಿ, ಹುಬ್ಬಳ್ಳಿ:
ಕನ್ನಡ ಕಾವ್ಯ ಲೋಕದಲ್ಲಿ ಸಮನ್ವಯ ಕವಿ ಎಂದು ಹೆಸರಾದ, ನಾಡೋಜ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತ ಡಾ.ಚನ್ನವೀರ ಕಣವಿ ನಮ್ಮನೆಲ್ಲರನ್ನು ಅಗಲಿರುವುದು ದುಃಖ ಸಂಗತಿಯಾಗಿದೆ ಎಂದು ಶಾಸಕ ಜಗದೀಶ್ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದ ನಿಮಿತ್ತ ಒಂದು ತಿಂಗಳಿನಿಂದ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆ ಉಸಿರೆಳೆದಿದ್ದಾರೆ. ನವಿರಾದ ಕವಿತೆಗಳ ರಚನೆಯಿಂದ
ಪ್ರತಿಮಾಕವಿ ಎಂದು ಪ್ರಸಿದ್ಧಿ ಪಡೆದಿದ್ದರು. ಅವರ ಕವನಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ವೈಯಕ್ತಿಕವಾಗಿ ಅವರ ಕವಿತೆಗಳ ಸಹೃದಯಿ ಓದುಗನಾಗಿದ್ದೆ. ಜೀವನಧ್ವನಿ, ಕಾವ್ಯಾಕ್ಷಿ, ಭಾವಜೀವಿ, ಆಕಾಶ ಭುಟ್ಟಿ, ಮಧುಚಂದ್ರ, ನಗರದಲ್ಲಿ ನೆರಳು, ಕಾರ್ತಿಕ ಮೋಡ ಹೀಗೆ ಹಲವಾರು ಕವನ ಸಂಕಲನಗಳು, ವಿಮರ್ಶಾ ಲೇಖನ, ಮಕ್ಕಳ ಕವಿತೆಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಇಂಗ್ಲೀಷ್ ಸಾಹಿತ್ಯ ಪ್ರಕಾರವಾದ ಸಾನೆಟ್ ಗಳ ಮಾದರಿಯಲ್ಲಿ ಕನ್ನಡದಲ್ಲಿ ಸುನೀತಗಳನ್ನು ರಚಿಸಿದರು.
ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅವರ ಸಹೃದಯಿ ಓದುಗರಿಗೆ ದೇವರು ಕರುಣಿಸಲಿ ಎಂದು ಶೋಕ ಸಂದೇಶದಲ್ಲಿ ಕೋರಿದ್ದಾರೆ.