ಹೊಸದಿಗಂತ ವರದಿ, ಹುಬ್ಬಳ್ಳಿ:
ಚೆಂಬೆಳಕಿನ ಕವಿಯೆಂದೇ ಪ್ರಸಿದ್ಧರಾಗಿದ್ದ ಕನ್ನಡ ಸಾರಸತ್ವ ಲೋಕದ ಧೃವತಾರೆ ನಾಡೋಜ ಚೆನ್ನವೀರ ಕಣವಿಯವರ ನಿಧನಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೊಸಗನ್ನಡ ಕಾವ್ಯ ಪರಂಪರೆಯ ಹಿರಿಯ ತಲೆಮಾರಿನ ಕವಿಯೆಂದೇ ಹೆಸರುವಾಸಿಯಾಗಿದ್ದ ಚೆನ್ನವೀರ ಕಣವಿಯವರು ತಮ್ಮ ಅದ್ಭುತ ಕಾವ್ಯ ಪ್ರತಿಭೆಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸರಳ ಸಜ್ಜನಿಕೆಯ ಸದ್ಗುಣ ಸಂಪನ್ನ ಕವಿಯಾಗಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಅವರು ನವೋದಯ ಹಾಗೂ ನವ್ಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಚೆನ್ನವೀರ ಕಣವಿರವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದ್ದು, ಸಾಹಿತ್ಯ ಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.