ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ದಿನವೇ ಅತ್ತ ಮಹಾಮೇಳಾವ್ ಆಯೋಜಿಸುವ ಮೂಲಕ ಎಂಇಎಸ್ ಉದ್ಧಟತನ ಮೆರೆದಿದೆ.ಎನ್ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕರು ಬೆಳಗಾವಿಗೆ ಬರಲು ಯತ್ನಿಸಿದ್ದಾರೆ.
ಇದರ ನಡುವೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಕರ್ನಾಟಕದಲ್ಲಿರುವ ಮರಾಠಿಗರ ಹಕ್ಕುಗಳ ಕುರಿತು ಮಾತನಾಡುವ ಮೂಲಕ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಯತ್ನ ಮಾಡಿದ್ದಾರೆ.
ಮಹಾರಾಷ್ಟ್ರ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿರುವ ಮರಾಠಿಗರ ಹಕ್ಕುಗಳ ರಕ್ಷಣೆಗೆ ಬಿಜೆಪಿ ಹಾಗೂ ಶಿವಸೇನೆ (ಏಕನಾಥ್ ಶಿಂಧೆ ಬಣ) ಸರ್ಕಾರ ಬದ್ಧವಾಗಿದೆ. ಹಕ್ಕುಗಳ ರಕ್ಷಣೆಗಾಗಿ ಶೀಘ್ರದಲ್ಲಿಯೇ ಮೂವರು ಸಚಿವರ ಸಮಿತಿ ರಚಿಸಲಾಗುವುದು. ಕರ್ನಾಟಕ ಪಾಕಿಸ್ತಾನದಲ್ಲಿಲ್ಲ ನಿಜ, ಆದರೆ, ಮರಾಠಿಗರ ರಕ್ಷಣೆಯು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದತನಕ ಗಡಿ ಬಿಕ್ಕಟ್ಟಿನ ಚರ್ಚೆ, ವಾದ ಬೇಡ ಎಂದು ಅಮಿತ್ ಶಾ ಅವರು ಎರಡೂ ರಾಜ್ಯಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ, ಮಹಾರಾಷ್ಟ್ರ ಹೇಳಿಕೆಗಳನ್ನು ನೀಡುತ್ತಿದೆ.