ಹೊಸದಿಗಂತ ವರದಿ, ಮೈಸೂರು:
ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಂದ್ರ ಗೃಹ ಸಚಿವ ಅಮೀತ್ ಶಾರನ್ನು ಭೇಟಿಯಾಗಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಶುಕ್ರವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜಗದೀಶ್ ಶೆಟ್ಟರ್ ಅವರು ಅಮಿತ್ ಶಾರನ್ನು ಹೊಸದಾಗಿ ಭೇಟಿ ಮಾಡುತ್ತಿಲ್ಲ. ಅವರು ಇದೇ ಮೊದಲು ದೆಹಲಿಗೆ ಹೋಗಿಲ್ಲ. ಈ ಹಿಂದೆ ಅನೇಕ ಬಾರಿ ಹೋಗಿದ್ದಾರೆ. ಮುಖ್ಯಮಂತ್ರಿಗಳು ನಾನಾ ಯೋಜನೆಗಳ ಸಂಬAಧ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ್ದಾರೆ. ಹಾಗಾಗಿ ಅವರ ದೆಹಲಿ ಭೇಟಿಯ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಪೂರ್ವ ನಿಗದಿತ ಕಾರ್ಯಕ್ರಮಗಳಿಂದ ಅಮಿತ್ ಶಾ ಭೇಟಿಯಾಗಿಲ್ಲ.ಅವರು ಹೈಕಮಾಂಡ್ ಭೇಟಿಗೆ ಯಾವಾಗ ಬೇಕಾದರೂ ಸಮಯ ಪಡೆಯಲಿದ್ದಾರೆ. ಜೊತೆಗೆ ಪ್ರಧಾನಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗುತ್ತಾರೆ ಕೋರ್ ಕಮಿಟಿ ಸಭೆಯಲ್ಲಿ ದೂರುಗಳಿದ್ದರೆ ದೆಹಲಿಗೆ ಬನ್ನಿ ಎಂದು ಅಮಿತ್ ಶಾ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಇದ್ದರು.