ಹೊಸ ದಿಗಂತ ವರದಿ, ಕಲಬುರಗಿ:
ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಹಲವಾರು ಲೋಪದೋಷಗಳಾಗಿದ್ದು, ಸತ್ಯವನ್ನು ಮರೆಮಾಚಿ ಇತಿಹಾಸ ತಿರುಚಲಾಗಿದೆ. ಕರ್ನಾಟದ ಮಹನೀಯರ ಜೀವನಚರಿತ್ರೆ ಬಗ್ಗೆ ತಪ್ಪು ಮಾಹಿತಿ ನೀಡಿ ಕನ್ನಡದ ಆಸ್ಮಿತೆಗೆ ಧಕ್ಕೆ ಮಾಡಲಾಗಿದೆ. ಇದರ ವಿರುದ್ದ ಕನ್ನಡದ ಆಸ್ಮಿತೆ ಉಳಿಸಲು ನಾಳೆ 15ರಂದು ಕಲಬುರಗಿಯ ಜಗತ್ ಸರ್ಕಲ್ ಬಳಿಯ ಬಸವೇಶ್ವರ ಪುತ್ಥಳಿಯ ಮುಂದೆ 24 ಗಂಟೆಗಳ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ವಕ್ತಾರ, ಶಾಸೂ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರು ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಹಿತಿಗಳು, ಪ್ರಗತಿಪರ ಚಿಂತಕರು, ಸಮುದಾಯ ಸಂಘಟಕರು, ಮಠಾಧೀಶರು, ಬರಹಗಾರರು, ರಾಜಕಾರಣಿಗಳು ಸೇರಿದಂತೆ ಬಹುತೇಕರು ಪಠ್ಯಪುಸ್ತಕದಲ್ಲಿ ತಿರುಚಲಾದ ಐತಿಹಾಸಿಕ ಘಟನೆಗಳ ವಿರುದ್ದ ಹಾಗೂ ಕನ್ನಡದ ಆಸ್ಮಿತೆ ಉಳಿಸಲು ನಾಳೆ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಮಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸೂಫಿ ಸಂತರ, ಬುದ್ದ ಬಸವನ ನಾಡು ಕಲಬುರಗಿ ಯಲ್ಲೂ ಕೂಡಾ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಜಗತ್ ಸರ್ಕಲ್ ಬಳಿಯ ಬಸವೇಶ್ವರ ಪ್ರತಿಮೆ ಮುಂದೆ ನಾಳೆ ಬೆಳಿಗ್ಗೆ 10 ಗಂಟೆಯಿಂದ ನಾಡಿದ್ದು 10 ಗಂಟೆಗೆಯವರೆಗೆ ಅಹೋರಾತ್ರಿ ಧರಣಿ ನಡೆಲಾಗುವುದು ಎಂದರು.
ರಾಜ್ಯ ಸರ್ಕಾರ ಪಠ್ಯವನ್ನು ಕೇಸರಿಕರಣ ಮಾಡಲು ಹೊರಟಿದ್ದು, ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಇವರ ಕೊಡಲು ಹೊರಟಿರುವ ತಪ್ಪು ಮಾಹಿತಿಗಳನ್ನು ಓದಿ ಮುಂದೆ ಧರ್ಮದ ಪರ ಕೆಲಸ ಮಾಡಲು ದಾರಿ ಮಾಡಿಕೊಡುತ್ತಿದ್ದಾರೆ ಎಂದರು ದೂರಿದ ಅವರು, ಪಠ್ಯಗಳಲ್ಲಿ ಬಸವಣ್ಣನವರು ಉಪನಯನ ಮಾಡಿಸಿಕೊಂಡು ಲಿಂಗದೀಕ್ಷೆ ಸ್ವೀಕರಿಸಿ ವೀರಶೈವ ಪರಂಪರೆಯನ್ನು ಅಭಿವೃದ್ದಿ ಪಡಿಸಿದರು ‘ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಬಸವಣ್ಣನವರು ಉಪನಯನ ತಿರಸ್ಕರಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ವೀರಶೈವ ಪರಂಪರೆ ಅಭಿವೃದ್ದಿಪಡಿಸಿದ್ದರು ಎಂದರೆ ಆಗಲೇ ಆ ಪರಂಪರೆ ಇತ್ತಾ ? ಅಥವಾ ಸ್ಥಾಪನೆ ಮಾಡಿದ್ರಾ? ವ್ಯವಸ್ಥೆಯ ವಿರುದ್ದವೇ ಸಿಡಿದೆದ್ದ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಇದು ಪಠ್ಯದಲ್ಲಿ ಸೇರಿಸಿಲ್ಲ ಇದು ಬಸವಣ್ಣನವರಿಗೆ ಮಾಡಿದ ಅವಮಾನ ಎಂದರು.
ಈ ಸಂದರ್ಭ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್, ಶಿವಾನಂದ ಪಾಟೀಲ, ಭೀಮಣ್ಣ ಸಾಲಿ ಸೇರಿದಂತೆ ಮತ್ತಿತರಿದ್ದರು.