ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ಹೋರಾಟಕ್ಕೆ ಕ್ನಡ ಚಿತ್ರರಂಗ ತಮ್ಮ ಬೆಂಬಲ ಘೋಷಿಸಿದೆ. ಫಿಲ್ಮ್ ಚೇಂಬರ್ ಬಳಿ ಸ್ಯಾಂಡಲ್ವುಡ್ ನಟರು ಒಗ್ಗಟ್ಟಿನ ಮಂತ್ರ ಜಪಿಸಿ ಹೋರಾಟದಲ್ಲಿ ಭಾಗಿಯಾದರು. ನಟ ಶಿವರಾಜ್ಕುಮಾರ್ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ನಟ ದರ್ಶನ್, ಧೃವ ಸರ್ಜಾ, ದೊಡ್ಡಣ್ಣ, ಶ್ರೀಮುರುಳಿ, ಗರಿಜಾ ಲೋಕೇಶ್, ಪೂಜಾ ಹೆಗ್ಡೆ, ರಂಗಾಯಣ ರಘು, ಶ್ರೀನಾಥ್, ವಿಜಯ್ ರಾಘವೇಂದ್ರ, ಜೋಗಿ ಪ್ರೇಮ್, ಸಂಗೀತ ಮಾಂತ್ರಿಕ ಹಂಸಲೇಖ ಮೊದಲಾದ ತಾರಾಗಣ ಪ್ರತಿಭಟನೆಯಲ್ಲಿ ಭಾಗಿಯಾದರು.
ರಕ್ತ ಕೊಡ್ತೀವಿ, ಕಾವೇರಿ ನೀರು ಮಾತ್ರ ಕೊಡಲ್ಲ ಎಂಬ ಘೋಷಣೆಗಳನ್ನು ಕೂಗುತ್ತಾ ಮೊದಲು ನಮ್ಮ ಮನೆ ಚೆನ್ನಾಗಿರಬೇಕು. ಕಾವೇರಿ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಮ್ಮ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ನಟರು ಆಕ್ರೋಶ ಹೊರಹಾಕಿದರು.
ಕುಡಿಯಲು ನಮಗೇ ನೀರಿಲ್ಲ, ಇನ್ನು ಅವರಿಗೆಲ್ಲಿಂದ ಕೊಡೋದು. ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಕಾವೇರಿ ವಿವಾದ ಪರಿಹಾರವಾಗಿಲ್ಲ ಎಂದು ಹಿರಿಯ ನಟ ರಂಗಾಯಣ ರಘು ಹೇಳಿದರು.