ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಮುಂಜಾನೆ ಕಾನ್ಪುರ ನಗರದ ಬಸ್ಮಂಡಿ ಪ್ರದೇಶದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡ ಉಂಟಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿವೆ. ಐದು ವಿವಿಧ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿನ ಸಿದ್ಧ ಉಡುಪುಗಳ ಅಂಗಡಿಗಳಿಗೆ ಹೊತ್ತಿರುವ ಬೆಂಕಿ ಆರಿಸುವ ಇನ್ನೂ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಘಟನೆ ನಡೆದು 24 ಗಂಟೆಗಳಾದರೂ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಲಹಾಬಾದ್ ಜಿಲ್ಲೆಯ ಹೈಡ್ರಾಲಿಕ್ ಅಗ್ನಿಶಾಮಕ ಯಂತ್ರವನ್ನು ಸಹ ಬೆಂಕಿಯನ್ನು ನಂದಿಸುವ ಕೆಲಸಕ್ಕೆ ತೊಡಗಿಸಲಾಗಿದೆ. ಕಾನ್ಪುರ ನಗರದ ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳ ಅಗ್ನಿಶಾಮಕ ಟೆಂಡರ್ಗಳು ಪ್ರಸ್ತುತ ಬೆಂಕಿಯನ್ನು ನಂದಿಸುವಲ್ಲಿ ತೊಡಗಿವೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಬೆಂಕಿಯಲ್ಲಿ ಹಾನಿಗೊಳಗಾದ ವ್ಯಾಪಾರಸ್ಥರಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದರು. ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ಅವರು, “ಬೆಂಕಿಯು ಬಟ್ಟೆಗೆ ತಗುಲಿದ ಕಾರಣ ಸಾಕಷ್ಟು ಹೊಗೆ ಕಾಣಿಸಿಕೊಂಡಿದೆ, ಬೆಂಕಿ ಆರಿಸಲು ಸಾಧನಗಳನ್ನು ಒಳಗೆ ಕಳುಹಿಸಲಾಗುತ್ತಿದೆ” ಎಂದರು.
ನಗರದ ಬಸ್ಮಂಡಿ ಹಮರಾಜ್ ಮಾರುಕಟ್ಟೆ ಬಳಿಯ ಎಆರ್ ಟವರ್ನಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಮಸೂದ್ ಕಾಂಪ್ಲೆಕ್ಸ್ನ ಹತ್ತಿರದ ಕಟ್ಟಡಗಳಿಗೆ ವ್ಯಾಪಿಸಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಶಾರ್ಟ್ ಸರ್ಕ್ಯೂಟ್ನಿಂದ ಇದು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಕಾರಣವನ್ನು ಕಂಡುಹಿಡಿಯಲು ತನಿಖೆ ಪ್ರಾರಂಭಿಸಲಾಗಿದೆ.