ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ನಾಳೆ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ನಡುವೆ ಖಾಸಗಿ ಸಾರಿಗೆ ಸಂಘಟನೆ ಕೂಡ ಬಂದ್ ಬೆಂಬಲಿಸಿದ್ದು, ಹೋರಾಟಕ್ಕಿಳಿಯಲಿದೆ. ಆದರೆ, ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಎಂದಿನಂತೆ ಸಂಚರಿಸಲಿವೆ ಎಂದು ಸಾರಿಗೆ ನಿಗಮಗಳು ಮೌಖಿಕ ಆದೇಶ ಹೊರಡಿಸಿದೆ.
ಸಾರಿಗೆ ವ್ಯವಸ್ಥೆ ಅಗತ್ಯ ಸೇವೆಯಡಿ ಬರುವ ಕಾರಣದಿಂದಾಗಿ ಯಾವುದೇ ಕಾರಣಕ್ಕೂ ಬಸ್ ಸಂಚಾರ ನಿಲ್ಲಿಸದಂತೆ ಸೂಚಿಸಲಾಗಿದೆ. ಎಲ್ಲಾ ನೌಕರರು ನಾಳೆ ಕೆಲಸಕ್ಕೆ ಕಡ್ಡಾಯ ಹಾಜರಾತಿಗೆ ಸೂಚಿಸಲಾಗಿದೆ. ವಾರದ ರಜೆ, ದೀರ್ಘಾವಧಿ ರಜೆ ನೌಕರರನ್ನು ಹೊರತುಪಡಿಸಿ ಉಳದಂತೆ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಆದೇಶಿಸಲಾಗಿದೆ. ಇನ್ನೂ ಕೆಲಸಕ್ಕೆ ಹಾಜರಾಗದೆ ಹೋರಾಟದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಸೂಚಿಸಲಾಗಿದೆ.
ಡಿಪೋಗಳಲ್ಲಿ ಬಿಗಿ ಭದ್ರತೆ
ಬಂದ್ ಹಿನ್ನೆಲೆ, ಸಂಚರಿಸುವ ಬಸ್ಗಳ ಮೇಲೆ ಕಲ್ಲು ತೂರಾಟ ಮತ್ತಿತ್ತರ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಡಿಪೋಗಳಲ್ಲಿ ಬಿಗಿ ಬಂದೋಬಸ್ತ್ಗೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಎಲ್ಲಾ ಡಿಪೋಗಳಲ್ಲಿ ಡಿಪೋ ಮ್ಯಾನೇಜರ್ ಹಾಜರಿದ್ದು, ಬಸ್ಗಳ ಕಾರ್ಯಾಚರಣೆ ಗಮನಿಸುವಂತೆ ತಾಕೀತು ಮಾಡಲಾಗಿದೆ.