ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಶಿಕ್ಷಣದ ಸ್ವರೂಪವನ್ನು ಆಶಯ ಮತ್ತು ರಚನೆಯು ಮೌಲ್ಯ ಆಧಾರಿತದ ವಿದ್ಯಾರ್ಥಿ, ಕಲಿಕಾ ಕೇಂದ್ರಿತ ಮತ್ತು ಬಹು ಶಿಸ್ತಿನ ಶಿಕ್ಷಣವಾಗಿ ಬದಲಿಸಲು ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ತಿಳಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ವತಿಯಿಂದ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳ ಸಭೆ ಮತ್ತು ಪಿ.ಎಫ್.ಎಂ.ಎಸ್. ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಜ್ಞಾನ ಮಾತ್ರವಲ್ಲ. ಶಿಕ್ಷಣದ ಒಳಗಡೆ ಜ್ಞಾನ, ಕೌಶಲ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಎನ್ಎಸ್ಎಸ್ ಸ್ವಯಂಸೇವಕರು ಸಂಖ್ಯೆ ದ್ವಿಗುಣವಾಗಲು ನೂತನ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶವು ಕ್ರಿಯಾಶೀಲ ಕೋಶವಾಗಿದೆ. ಕೆಲವೇ ವರ್ಷಗಳಲ್ಲಿ ಎನ್ಎಸ್ಎಸ್ ಕೋಶವು ಜಾಗೃತಿ ಕಾರ್ಯಕ್ರಮಗಳು, ಕೋವಿಡ್ ಲಾಕ್ಡೌನ್ ಮತ್ತು ಲಸಿಕೆ ಮೇಳದ ಸಂದರ್ಭದಲ್ಲಿ ಯೋಧರಂತೆ ಕಾರ್ಯನಿರ್ವಹಿಸಿ ಮುನ್ನುಗ್ಗುತ್ತಿರುವುದು ಸಂತಸ ತಂದಿದೆ. ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರಾಂಶುಪಾಲರು, ಎನ್ಎಸ್ಎಸ್ ಅಧಿಕಾರಿಗಳು ಮತ್ತು ಎನ್ಎಸ್ಎಸ್ ಸ್ವಯಂಸೇವಕರ ಪಾತ್ರ ಪ್ರಮುಖವಾದದ್ದು ಎಂದರು.
ಎನ್ಎಸ್ಎಸ್ ಪ್ರಾಂತೀಯ ನಿರ್ದೇಶಕ ಖಾದ್ರಿ ನರಸಿಂಹಯ್ಯ, ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿದರು. ಪಿ.ಎಪ್.ಎಂ.ಎಸ್. ಕುರಿತು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಸಿ.ಎನ್.ಶ್ರೀಧರ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎಚ್.ಜಿ. ಗೋವಿಂದಗೌಡ ಮೊದಲಾದವರಿದ್ದರು.