ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರ ಸಂಘ ನೀಡಿದ್ದ ಗಡುವು ಇಂದಿಗೆ ಅಂತ್ಯವಾಗಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ (ESCOM) ನೌಕರರ ವೇತನ ಪರಿಷ್ಕರಣೆ ಮಾಡಿದೆ.
2022ರ ಏಪ್ರಿಲ್ನಿಂದ ಅನ್ವಯವಾಗುವಂತೆ ಈಗಿರುವ ವೇತನದ ಮೇಲೆ ಶೇ 20ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದ ಕಾರಣ ಕೆಪಿಟಿಸಿಎಲ್ ನೌಕರರು ನಾಳಿನ ಮುಷ್ಕರನ್ನು ವಾಪಸ್ ಪಡೆದಿದ್ದಾರೆ.
ವೇತನ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರು ರಾಜ್ಯ ಸರ್ಕಾರಕ್ಕೆ 14 ದಿನಗಳ ಗಡುವು ನೀಡಿತ್ತು. ಅಲ್ಲದೆ ನಾಳೆ (ಮಾ.16) ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕೆಪಿಟಿಸಿಎಲ್ ನೌಕರರ ಸಂಘ ಕರೆ ಕೊಟ್ಟಿತ್ತು. ಈ ಹಿನ್ನೆಲೆ ಎಲ್ಲಾ ಎಸ್ಕಾಂಗಳು ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಸುಮಾರು 50 ಸಾವಿರ ನೌಕರರು ನಾಳೆಯ ಮುಷ್ಕರದಲ್ಲಿ ಭಾಗಿಯಾಗಲಿದ್ದರು. ಈ ಹಿನ್ನೆಲೆ ಎಚ್ಚತ್ತ ಸರ್ಕಾರ ಶೇ20 ರಷ್ಟು ನೌಕರರ ವೇತನವನ್ನು ಹೆಚ್ಚಳ ಮಾಡಿದೆ.