ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ವೆಳ್ಳರಿಕುಂಡು ತಾಲೂಕಿನ ಬಳಾಲ್ನಲ್ಲಿ ಭಾರೀ ಭೂಕುಸಿತವಾಗಿದ್ದರೆ, ಭೀಮನಡಿಯಲ್ಲಿ ಮಹಿಳೆ ಯೊಬ್ಬರು ನೀರುಪಾಲಾಗಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಲತಾ ಎಂಬಾಕೆ ನೀರುಪಾಲಾದವರು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ಚುರುಕುಗೊಂಡಿದೆ.
ಇನ್ನು ಭಾರೀ ಮಳೆಯ ಹಿನ್ನಲೆಯಲ್ಲಿ ಬಳಾಲ್ ಚುಳ್ಳಿ ವಲಯದ ಅರಣ್ಯದಲ್ಲಿ ಭೂಕುಸಿತ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಭಾಗದಿಂದ ಮಣ್ಣು ರಸ್ತೆ, ಜನವಸತಿ ಪ್ರದೇಶಗಳಿಗೆ ಕೊಚ್ಚಿಬರುತ್ತಿದ್ದು, ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ಸುಮಾರು ೨೦ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.