ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನೀರಿನ ಕೊರತೆ, ರಸ್ತೆ ಸೌಲಭ್ಯಗಳನ್ನು ಸುಧಾರಿಸಲು ಡೆನ್ಮಾರ್ಕ್ ನೊಂದಿಗೆ ಕೈ ಜೋಡಿಸಲು ದೆಹಲಿ ಸರ್ಕಾರ ಮುಂದಾಗಿದೆ.
ಶುಕ್ರವಾರ ಭಾರತದಲ್ಲಿನ ಡೆನ್ಮಾರ್ಕ್ ರಾಯಭಾರಿ ಹೆಚ್.ಇ. ಫ್ರೆಡ್ಡಿ ಸ್ವಾನೆ ಅವರನ್ನು ಭೇಟಿಯಾಗಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಾಯು ಮಾಲಿನ್ಯ, ಅಂತರ್ಜಲ ಮರುಪೂರಣ ಮತ್ತು ವಿಶ್ವ ದರ್ಜೆಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು “ಡೆನ್ಮಾರ್ಕ್ ಸಹಯೋಗದಲ್ಲಿ ರಸ್ತೆ ಸೌಕರ್ಯ ಅಭಿವೃದ್ಧಿಗೆ ಚಿಂತಿಸಲಾಗುತ್ತಿದೆ. ದೆಹಲಿಯಲ್ಲಿ 500 ಕಿಮೀ ರಸ್ತೆಗಳನ್ನು ಯುರೋಪಿಯನ್ ಮಾನದಂಡಗಳಿಗೆ ಸಮನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಜೊತೆಗೆ ನೀರಿನ ಸಮಸ್ಯೆ ನೀಗಿಸಲು ಅಂತರ್ಜಲ ಮರುಪೂರಣ, ಮಳೆಕೊಯ್ಲು ಮುಂತಾದ ವಿಷಯಗಳ ಕುರಿತು ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ವಿವರವಾದ ಯೋಜನೆ ಸಿದ್ಧಪಡಿಸಲಾಗುವುದು” ಎಂದಿದ್ದಾರೆ.