ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಬೃಹದಾಕಾರದ ಪುತ್ಥಳಿ ಅನಾವರಣಗೊಳ್ಳಲಿದೆ. ಇಂದು ಕರ್ನಾಟಕದ ರಾಜಧಾನಿಯಾಗಿ ಐಟಿ ಹಬ್ ಆಗಿ ಹೊರಹೊಮ್ಮಿರುವ ಸಿಲಿಕಾನ್ ಸಿಟಿ ಉದ್ಯಮ ಶೀಲತೆಗೆ ಜಗತ್ತಿನಲ್ಲೇ ಹೆಸರು ಮಾಡಿದೆ. ಇಂದು ಬೆಂಗಳೂರು ಇಷ್ಟೆಲ್ಲ ಮುಂದುವರೆಯಲು ಸಹಾಯಕವಾಗಿದ್ದು ಕೆಂಪೃಗೌಡರಿಗೆ ಅಂದು ಇದ್ದ ದೂರಗಾಮಿತ್ವ.
ತಮ್ಮ ದೂರದೃಷ್ಟಿಯಿಂದ ಕೆಂಪೇಗೌಡರು ಬೆಂಗಳೂರನ್ನು ಸಮರ್ಥವಾಗಿ ನಿರ್ಮಿಸಿದ ಪರಿ ಅನನ್ಯವಾದುದು. ಬೆಂಗಳೂರನ್ನು ಎಲ್ಲ ದೃಷ್ಟಿಯಿಂದಲೂ ಸಮೃದ್ಧವಾಗಿಸುವಲ್ಲಿ ಅವರಿಗಿದ್ದ ಒಳನೋಟದಿಂದಲೇ ಬೆಂಗಳೂರು ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಕೋಟೆಗಳ ನಿರ್ಮಾಣ,ನಗರ ನಿರ್ಮಾಣದ ಜತೆಗೆ ಅತ್ಯಂತ ಅಗತ್ಯವಾಗಿದ್ದ ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆಗೂ ಒತ್ತು ಕೊಟ್ಟಿದ್ದರು ಕೆಂಪೇಗೌಡರು.
ಅವರು ಕುಡಿಯಲು ಮತ್ತು ನೀರಾವರಿಗೆ ಸಾಕಷ್ಟು ನೀರು ಸರಬರಾಜು ಮಾಡಲು 50 ಕ್ಕೂ ಹೆಚ್ಚು ಕೆರೆಗಳು ಮತ್ತು ಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದರು.
ಹಲಸೂರು ಕೆರೆ, ಹೆಬ್ಬಾಳ ಕೆರೆ, ಲಾಲ್ಬಾಗ್ ಕೆರೆ, ಯಡಿಯೂರು ಕೆರೆ, ಮಡಿವಾಳ ಕೆರೆ, ವರ್ತೂರು ಕೆರೆ, ಕೆಂಗೇರಿ ಕೆರೆ, ನಾಗವಾರ ಕೆರೆ ಹೀಗೆ ಎಲ್ಲ ದಿಕ್ಕಿನಿಂದಲೂ ಕೆರಗಳು ಬೆಂಗಳೂರನ್ನಾವರಿಸಿ ಕೊಂಡಿವೆ. ಈ ಕೆರೆಗಳೆಲ್ಲವೂ ಕೆಂಪೇಗೌಡರ ಕಾಲದಲ್ಲಿಯೇ ನಿರ್ಮಾಣವಾಗಿದ್ದು. ಬೆಂಗಳೂರನ್ನು ಸಮೃದ್ಧವಾಗಿಸುವಲ್ಲಿ ಈ ಕೆರೆಗಳು ಹೆಚ್ಚಿನ ಮಹತ್ವ ಪಡೆದಿವೆ.
ಇವುಗಳ ಪ್ರಯೋಜನವನ್ನು ಬೆಂಗಳೂರಿಗರು ಇಂದಿಗೂ ಪಡೆಯುತ್ತಿದ್ದಾರೆ. ಕೆಂಪೇಗೌಡರ ದೂರ ದೃಷ್ಟಿಯ ಲಾಭವನ್ನು ಈ ನಗರದ ಜನರು ಇಂದಿಗೂ ಅನುಭವಿಸುತ್ತಿದ್ದಾರೆ.