ಹೊಸದಿಗಂತ ವರದಿ ಮಡಿಕೇರಿ:
ಗಿರಿಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದ ಕೇರಳ ಮೂಲದ ಕ್ರೈಸ್ತ ಮಿಷನರಿ ದಂಪತಿಯನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕೊಡಗಿನ ಕುಟ್ಟದಲ್ಲಿ ನಡೆದಿದೆ. ಕುಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೂಜೆಕಲ್ ಕಾಲೋನಿಯ ಒಳಗೆ ಕೇರಳ ಮೂಲದ ವ್ಯಕ್ತಿಗಳು ಹಲವು ಸಮಯದಿಂದ ಆಮಿಷ ಒಡ್ಡಿ ಗಿರಿಜನರನ್ನು ಮತಾಂತರ ಮಾಡುತಿದ್ದರೆನ್ನಲಾಗಿದೆ.
ಈ ಸಂಬಂಧ ಸ್ಥಳೀಯರು ಹಲವು ಬಾರಿ ಎಚ್ಚರಿಕೆ ನೀಡುವುದರೊಂದಿಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದರೆಂದು ಹೇಳಲಾಗಿದೆ.
ಆದರೆ ತಮ್ಮ ಅಕ್ರಮ ಚಟುವಟಿಕೆಯನ್ನು ಕ್ರೈಸ್ತ ಮಿಷನರಿಗಳು ಮುಂದುವರಿಸಿರುವ ಸುಳಿವು ದೊರೆತ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿಗಳನ್ನು ಹಿಡಿದು ಕುಟ್ಟ ಪೊಲೀಸರಿಗೆ ಒಪ್ಪಿಸಿದರು. ಅಲ್ಲದೆ ನೂತನವಾಗಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಅದರಂತೆ ಆರೋಪಿಗಳ ವಿರುದ್ದ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ ಜಿಲ್ಲೆಯಲ್ಲಿ ಪ್ರಥಮ ಪ್ರಕರಣ ದಾಖಲಾದಂತಾಗಿದ್ದು, ಕಾರ್ಯಾಚರಣೆಯಲ್ಲಿ ಬಾಡಗ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಪೆಮ್ಮಣಮಾಡ, ಬೂತ್ ಅಧ್ಯಕ್ಷ ಜಾಯ್ ಅಯ್ಯಪ್ಪ, ಕುಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಮಾತೃ ಮಂಡಳಿ ತಾಲೂಕು ಅಧ್ಯಕ್ಷೆ ತೀತಿರ ತೀರ್ಥ ಮಂಜುನಾಥ್, ಭಜರಂಗದಳ ತಾಲೂಕು ಸಂಚಾಲಕ ಸಜು ಗಣಪತಿ, ಧರ್ಮ ಜಾಗರಣ ಸ್ವಯಂಸೇವಕರು, ಹಿಂದೂ ಪರ ಕಾರ್ಯಕರ್ತರು ಭಾಗವಹಿಸಿದ್ದರು.