ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪನ್ನಿಯಾರ್, ಚೆಂಗುಲಂ, ಪಲ್ಲಿವಾಸಲ್ ಜಲವಿದ್ಯುತ್ ಯೋಜನೆ ನವೀಕರಣಕ್ಕಾಗಿ ಕೆನಡಾದ ಎಸ್ಎನ್ಸಿ ಲಾವಲಿನ್ ಕಂಪನಿಯೊಂದಿಗೆ ನಡೆಸಿದ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬರೋಬ್ಬರಿ 39ನೇ ಬಾರಿ ಮುಂದೂಡಿಕೆಯಾಗಿದೆ.
ಬುಧವಾರ ಈ ಪ್ರಕರಣದ ಅಂತಿಮ ವಿಚಾರಣೆ ನಡೆಯಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ ಮುಂದೆ ಬಂದಿರುವ ಇತರ ಪ್ರಕರಣಗಳ ವಿಳಂಬದಿಂದಾಗಿ ಲಾವ್ಲಿನ್ ಪ್ರಕರಣವನ್ನು ಪರಿಗಣಿಸಲಾಗಿಲ್ಲ. ಜೊತೆಗೆ ಅಂತಿಮ ವಾದದ ಪಟ್ಟಿಯಲ್ಲಿದ್ದರೂ, ಯಾವುದೇ ವಕೀಲರು ಈ ಪ್ರಕರಣದಲ್ಲಿ ವಾದ ಮಂಡಿಸಲಿಲ್ಲ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂಧನ ಇಲಾಖೆ ಕಾರ್ಯದರ್ಶಿ ಕೆ. ಮೋಹನಚಂದ್ರನ್ರಿಂದ ಈ ಒಪ್ಪಂದದಲ್ಲಿ 86,25 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಜಂಟಿ ಕಾರ್ಯದರ್ಶಿ ಎ. ಫ್ರಾನ್ಸಿಸ್ ಹಾಗೂ ಇತರರನ್ನು ಖುಲಾಸೆಗೊಳಿಸಿದ 2017 ರ ಹೈಕೋರ್ಟ್ ತೀರ್ಪಿನ ವಿರುದ್ಧ ಈಗ ಸಿಬಿಐ ಅರ್ಜಿ ಸಲ್ಲಿಸಿದೆ.