ಹೊಸದಿಗಂತ ವರದಿ ಕಲಬುರಗಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಯಾವ ಕಾನೂನಿನಡಿ ಜಾರಿ ನಿರ್ದೇಶನಾಲಯದವರು ಬಂಧನ ಮಾಡುತ್ತಾರೆ ಎಂಬುದು ಮೊದಲು ತಿಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ಯಾರ ಅಣತಿಯಂತೆ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಮೊದಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೇಲೆ ಕೇಸ್ ದಾಖಲಾಗಿತ್ತು. ಮೊದಲು ಅದರ ತನಿಖೆ ಪೂರ್ಣಗೊಳಿಸಲಿ ಎಂದರು.
ರಾಹುಲ್ ಗಾಂಧಿ ಮೂರನೆ ದಿನ ಕೂಡ ರಾಹುಲ್ ಗಾಂಧಿ ವಿಚಾರಣೆ ಹೋಗಿದ್ದಾರೆ. ನ್ಯಾಷನಲ್ ಹೆರಾಲ್ಡ್ನ ಯಾವ ಕೇಸ್ನಲ್ಲಿ ವಿಚಾರಣೆ ಮಾಡ್ತಿದ್ದಾರೆ ಎಂಬುದು ಬಿಜೆಪಿಯವರಿಗೂ ತಿಳಿದಿಲ್ಲ, ಇಡಿಯವರಿಗೂ ತಿಳಿದಿಲ್ಲ. 90 ಕೋಟಿ ರೂ. ಸಾಲ ನ್ಯಾಷನಲ್ ಹೆರಾಲ್ಡ್ಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ, ಸಾಲ ಕೊಡಬಾರದು ಎಂದು ಎಲ್ಲಾದರೂ ಕಾನೂನು ಇದೆಯಾ? ಅವರು ಕೊಟ್ಟ ಹಣದಲ್ಲಿ 60 ಕೋಟಿ ರೂ. ಖರ್ಚಾಗಿದೆ. ಉಳಿದ ಹಣ ಮೂಲ ಸೌಕರ್ಯ ಕಲ್ಪಿಸಕೊಳ್ಳಲು ನೀಡಿದ್ದಾರೆ ಎಂದು ಹೇಳಿದರು.
ಚುನಾವಣೆ ಸಮೀಪ ಬರುತ್ತಿದ್ದಂತೆ ಇವರಿಗೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎದ್ದು ಕಾಣುತ್ತಾರೆ. ಕೇವಲ ಮಾನಸಿಕ ಹಿಂಸೆ ನಿಡಲು ಈ ವಿಚಾರಣೆ ಎಂಬ ನಾಟಕ ಮುಂದುವರಿದಿದೆ. ಎಲ್ಲೆಡೆ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.